![](https://static.wixstatic.com/media/20adf4_6e4766e959554531ad7c18a5167ee3b5.png/v1/fill/w_96,h_96,al_c,q_85,usm_0.66_1.00_0.01,blur_2,enc_auto/20adf4_6e4766e959554531ad7c18a5167ee3b5.png)
ನಾನೇನೂ ಹೇಳುವದಿಲ್ಲ
ನಾನೇನೂ ಹೇಳುವದಿಲ್ಲ ನಿಮಗೆಲ್ಲವೂ ಗೊತ್ತು ಗೊತ್ತಿದ್ದರೂ ನೀವು ಮಾತನಾಡುವದಿಲ್ಲ ನೀವು ಮಾತನಾಡದಿದ್ದರೂ ನನಗೆ ಗೊತ್ತು ನಿಮಗೆಲ್ಲವೂ ಗೊತ್ತಿದೆಯೆಂದು ಅದಕ್ಕೇ ನಾನೇನೂ ಹೇಳುವದಿಲ್ಲ. * ಎಲ್ಲವೂ ಎಲ್ಲರಿಗೂ ಗೊತ್ತಿರಲೇಬೇಕೆಂದೇನಿಲ್ಲ, ಗೊತ್ತಿದ್ದರೂ ಹೇಳಲೇಬೇಕೆಂದೇನಿಲ್ಲ ಹೇಳಿದರೂ ಅದು ಎಲ್ಲರಿಗೂ ತಿಳಿಯಲೇಬೇಕೆಂದೇನಿಲ್ಲ ತಿಳಿದವರು ತಿಳಿದಿದೆ ಎಂದು ಹೇಳುವದಿಲ್ಲ; ತಿಳಿಯದವರು ಹೇಳಿದರೆ ಅದು ನಮಗೆ ತಿಳಿಯುವದೂ ಇಲ್ಲ ಅದಕ್ಕೇ ನಾನೇನೂ ಹೇಳುವದಿಲ್ಲ ಏಕೆಂದರೆ ಹಿಂದೆ ಹೇಳಿದ್ದೇ ಇನ್ನೂ ಜೀರ್ಣವಾಗಿಲ್ಲ * ಇಲ್ಲಿ ಅಕ್ರಮಗಳು ಸಕ್ರಮವಾಗುತ್ತವೆ, ಇಲ್ಲಿ ಅಯೋಗ್ಯರು ಯೋಗ್ಯರೆನಿಸುತ್ತಾರೆ ಇಲ್ಲಿ ಭ್ರಷ್ಟತೆ ವರವಾಗುತ್ತದೆ, ಇಲ್ಲಿ ಪ್ರಾಮಾಣಿಕತೆ ಶಾಪವಾಗುತ್ತದೆ, ಇಲ್ಲಿ ಸುಳ್ಳು ಹೇಳಿದವರು ಅರಮನೆಯೊಳಗಿರುತ್ತಾರೆ ಸತ್ಯ ಹೇಳಿದವರು ಸೆರೆಮನೆಯೊಳಗಿರುತ್ತಾರೆ ಇಲ್ಲಿ ಸತ್ಯ ನ್ಯಾಯ ಕಾನೂನುಗಳ ಮಾರಾಟ ಮಾಡುವವರೂ ಇದ್ದಾರೆ ಕೊಳ್ಳುವವರೂ ಇದ್ದಾರೆ; ಇಲ್ಲಿ ಭಗವದ್ಗೀತೆ, ಕುರಾನು, ಬೈಬಲ್ಲುಗಳ ಮುಟ್ಟಿಯೇ ಸುಳ್ಳು ಹೇಳುವವರಿದ್ದಾರೆ, ಮತ್ತೆ ನಾನು ಹೇಳುವದೆಲ್ಲ ಸತ್ಯ ಎನ್ನುತ್ತಾರೆ, ಸತ್ಯ ಸುಳ್ಳಾಗುವದಕ್ಕೆ ಸುಳ್ಳು ಸತ್ಯವಾಗುವದಕ್ಕೆ ಹೆಚ್ಚು ಹೊತ್ತು ಬೇಕಿಲ್ಲ, ಸ್ವಲ್ಪ ಹಣ ಬೇಕು, ಅಷ್ಟೇ * ಗಾಂಧೀಜಿ ಹೇಳಿದ್ದಾರೆ- " ಕಿವಿ, ಕಣ್ಣು , ಬಾಯಿ ಎಲ್ಲಮುಚ್ಚಿಕೊಳ್ಳಿ" ಅದಕ್ಕೇ ನಾವು ಪ್ರತಿಜ್ಞೆ ಮಾಡಿದ್ದೇವೆ " ಒಳ್ಳೆಯದನ್ನು ನೋಡುವದಿಲ್ಲ ಒಳ್ಳೆಯದನ್ನು ಮಾಡುವದಿಲ್ಲ ಒಳ್ಳೆಯದನ್ನು ಕೇಳುವದಿಲ್ಲ" ಆದ್ದರಿಂದ ನನ್ನನ್ನೇನೂ ಕೇಳಬೇಡಿ ನಾನೇನೂ ಹೇಳುವದಿಲ್ಲ; ಹೇಳಿದರೆ ನೀವೂ ಕೇಳುವದಿಲ್ಲ. - ಎಲ್. ಎಸ್. ಶಾಸ್ತ್ರಿ ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ ( ಎಲ್. ಎಸ್. ಶಾಸ್ತ್ರಿ) ಬರವಣಿಗೆಯ ಕಾಯಕದಲ್ಲಿ ತಮ್ಮನ್ನ ಸಂಪೂರ್ಣವಾಗಿ ತೆತ್ತುಕೊಂಡಿರುವ ಶ್ರೀಯುತರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು.ಪತ್ರಿಕೋದ್ಯಮದಲ್ಲಿ ೫೬ ವರ್ಷಗಳ ಅಖಂಡ ಸೇವೆ. ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ , ಲೋಕದರ್ಶನ, ಶೃಂಗಾರ, ನವಕಲ್ಯಾಣ, ದೀನವಾಣಿ, ಜನತಾ, ನವನಾಡು, ಕರ್ನಾಟಕ ಮಲ್ಲ ಮೊದಲಾದ ದಿನಪತ್ರಿಕೆ, ಸಾಪ್ತಾಹಿಕಗಳಲ್ಲಿ ಸಂಪಾದಕ, ಉಪಸಂಪಾದಕ, ವರದಿಗಾರನಾಗಿ ಕಾರ್ಯ ನಿರ್ವಹಣೆ. ಹತ್ತು ಸಾವಿರ ಸಂಪಾದಕೀಯಗಳು, ಎರಡು ಸಾವಿರ ಮುನ್ನುಡಿಗಳು. ಹೀಗೆ ಪಾದರಸದಂತೆ ಚಲನಶೀಲರಾಗಿರುವ ಎಲ್ಎಸ್ಎಸ್ ಅವರಿಗೆ ೭೬ ಅಂದರೆ ನಂಬುವುದು ಕಷ್ಟ.ಅವರು ನಿತ್ಯ ಯುವಕರು. - ಸಂಪಾದಕ.
![ನಾನೇನೂ ಹೇಳುವದಿಲ್ಲ](https://static.wixstatic.com/media/a27d24_ca59022034d0479987830a9c5170ec2a~mv2.jpg/v1/fill/w_680,h_385,al_c,q_80,usm_0.66_1.00_0.01,enc_auto/Image-empty-state.jpg)