top of page

ಕುವೆಂಪು ಮಾತುಗಳು

೧. ಚಿರಂತನವಾದ ಮೌಲ್ಯಗಳನ್ನು ತ್ಯಜಿಸಿದ ಸಾಹಿತ್ಯ ಬಹುದಿನ ಬದುಕಲಾರದು.ನಿರಾಶೆ ಜೀವನ ಮೌಲ್ಯವಾಗದು.ನಾವೀಗ ಎದುರಿಸಬೇಕಾದ ಸಮಸ್ಯೆಗಳೆಂದರೆಅಸ್ಪೃಶ್ಯತೆ,ಜಾತೀಯತೆ,ಮೌಡ್ಯ ಹಾಗು ವರ್ಣಾಶ್ರಮ ನೀತಿಯಿಂದ ಉದ್ಭವಿಸುತ್ತಿರುವ ಸಮಸ್ಯೆಗಳು,ಜತೆಗೆ ಭ್ರಷ್ಟಾಚಾರ. ೨. ಜನಜೀವನವನ್ನು ಎಚ್ಚರಿಸುವ ತೂರ್ಯಧ್ವನಿ ಸಾಹಿತ್ಯದಿಂದ ಬರುತ್ತದೆ.ಸಾಹಿತ್ಯ ಜನಜೀವನದ ಇಂದಿನ ಸ್ಥಿತಿಯನ್ನು ವರ್ಣಿಸಿ ಮುಂದಿನ ಗತಿಯನ್ನು ನಿರ್ಣಯಿಸುತ್ಯದೆ.ಕೃತವಿದ್ಯರಾದ ಯುವಕರು ತಮ್ಮ ಆಕಾಂಕ್ಷೆಗಳನ್ನು ಬರೆದು ಓದಿ,ಮತ್ತೆ ಮತ್ತೆ ಹೇಳಿ ಹೇಳಿ, ಜನರ ಹೃದಯಗಳಲ್ಲಿ ಕಿಡಿಗಳನ್ನು ಬಿತ್ತ ಬೇಕು. ೩. ಜನರಿಗೆ ನೂತನ ಸಂಸ್ಕೃತಿಯ ಜ್ಞಾನ ಉಂಟಾಗ ಬೇಕಾದರೆ ಆ ಸಂಸ್ಕೃತಿಯನ್ನೊಳಗೊಂಡ ಸಾಹಿತ್ಯ ಅವರಲ್ಲಿ ಹರಡಬೇಕು.ಅದರಿಂದಲೇ ದೇಶದ ಅಭ್ಯುದಯ ಸಾಧ್ಯ.ರಷ್ಯಾ ಚೀನಾ ದೇಶಗಳಲ್ಲಿಯೂ ಜಪಾನ ತುರ್ಕಿಸ್ಥಾನಗಳಲ್ಲಿಯೂ ಆಗಿರುವ ಪರಿವರ್ತನೆಗೆ ಅಲ್ಲಿಯ ನೂತನ ಸಾಹಿತಿಗಳೆ ಮುಖ್ಯ ಕಾರಣ. ಯಾವಾಗ ನವ ದೃಷ್ಟಿಯ ಸಾಹಿತ್ಯ ಜನಸಾಮಾನ್ಯರಲ್ಲಿ ಹೆಚ್ಚಾಗಿ ಪ್ರಚಾರವಾಗುವುದೋ ಆಗಲೆ ದೇಶ ಕಣ್ದೆರೆಯುವುದು. ೪. ತಪಸ್ಸಿಲ್ಲದ ಕವಿ ಕುಕವಿ; ದರ್ಶನ ಮೂಲವಲ್ಲದ ಕವಿತೆ ಜಳ್ಳು.ಅದು ತೆರೆಯ ಮೇಲೆ ತೇಲುವ ನೊರೆಯೇ ಹೊರತು ಕಡಲಾಳದ ಮುತ್ತಲ್ಲ.ನೊರೆ ಕ್ಷಣಿಕ ಮನೋಹರವಾದುದು ಮುತ್ತುಗಳಂತೆ ಶಾಶ್ವತ ಘನವಾದುದಲ್ಲ. ಲಘುಕಾವ್ಯ ತಾತ್ಕಾಲಿಕ ಪ್ರಮೋದಕಾರಿಯಾಗಿ ನಶಿಸಿ ಹೋಗುತ್ತದೆ.ಕವಿಯ ತಪಸ್ಸಿನಿಂದ ದರ್ಶನಾತ್ಮಕವಾಗಿ ಮೂಡುವ ಕಾವ್ಯ ಅಚ್ಯುತ ಜ್ಯೋತಿಯಾಗಿ ಜೀವನವನ್ನು ಬೆಳಗುತ್ತದೆ. ‌ ಕುವೆಂಪು.

ಕುವೆಂಪು ಮಾತುಗಳು

©Alochane.com 

bottom of page