![](https://static.wixstatic.com/media/20adf4_6e4766e959554531ad7c18a5167ee3b5.png/v1/fill/w_96,h_96,al_c,q_85,usm_0.66_1.00_0.01,blur_2,enc_auto/20adf4_6e4766e959554531ad7c18a5167ee3b5.png)
ಆಲೋಚನೀಯ-13
ಡಾ. ಶ್ರೀಪಾದ ಶೆಟ್ಟಿಯವರ ಅವಿಚ್ಛಿನ್ನ ಕನಸು ಮತ್ತು ಅದಕ್ಕೆ ಪೂರಕವಾಗಿ ಅವರ ಮಗ ನಿಶಾಂತನ ತಾಂತ್ರಿಕ ನೆರವಿನ ಫಲವಾಗಿ ಧರೆಗಿಳಿದ ‘ಆಲೋಚನೆ’, ಈ ತಿಂಗಳು 22ಕ್ಕೆ ನಾಲ್ಕು ತಿಂಗಳು ಪೂರೈಸುತ್ತಿದೆ. ಒಂದು ಪತ್ರಿಕೆಯ ಧೀರ್ಘ ಬದುಕಿನ ಯಾತ್ರೆಯಲ್ಲಿ ನಾಲ್ಕು ತಿಂಗಳು ಎಂಬುದು ತೀರ ಚಿಕ್ಕ ಅವಧಿಯೆಂಬುದು ಸತ್ಯ. ಆದರೆ ಈ ಅವಧಿಯಲ್ಲಿ ಆಲೋಚನೆ ಗಟ್ಟಿಯಾದ ಹೆಜ್ಜೆಯೊಂದಿಗೆ ಮುನ್ನಡಿಯಿಡುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಕವಿತೆ, ಕಥೆ, ಚಿಂತನಪರ ಬರಹ, ಕೃತಿ ಪರಿಚಯ, ವ್ಯಂಗ್ಯ ಚಿತ್ರ ಹೀಗೆ ಸಾಹಿತ್ಯದ ವಿವಿಧ ಆಯಾಮಗಳ ಕುರಿತಾದ ಒಟ್ಟೂ 252 ಕ್ಕೂ ಹೆಚ್ಚಿನ ಬರಹಗಳು ಈ ಕಿರು ಅವಧಿಯಲ್ಲಿ ಆಲೋಚನೆಯಲ್ಲಿ ಬೆಳಕು ಕಂಡಿವೆಯೆಂಬುದು ಉಲ್ಲೇಖನಾರ್ಹ. ಕೇವಲ ಕತೆ, ಕವನ, ಪ್ರಬಂಧಗಳಿಗೆ ಮಾತ್ರ ಸೀಮಿತವಾಗದೆ ಆರೋಗ್ಯ, ಆರ್ಥಿಕ, ಸಾಮಾಜಿಕ, ಕಾನೂನಾತ್ಮಕ ಹಾಗೂ ಆಧ್ಯಾತ್ಮಿಕ ಹೀಗೆ ಬದುಕಿನ ಬಹುಮುಖ ವಿಚಾರಗಳಿಗೆ ಸಂಬಂಧಿಸಿದ ಚಿಂತನಪರ ಬರಹಗಳು ಆಲೋಚನೆಯ ಗರಿಗೇರಿದ್ದು ಅತ್ಯಂತ ಸಂತಸದ ಮಾತಾಗಿದೆ. ಆಲೋಚನೆಗೆ ನಾಡಿನ ಹಿರಿಯ ಸಾಹಿತಿಗಳು ತಮ್ಮ ಕೃತಿಕೊಡುಗೆಯನ್ನು ನೀಡಿ ಆಲೋಚನೆಯ ಮೌಲ್ಯವನ್ನು ಹೆಚ್ಚಿಸಿದರೆ ಹೊಸ ಪ್ರತಿಭೆಗಳು ತಮ್ಮ ಕೊಡುಗೆಯ ಮೂಲಕ ಹೊಸ ವಿಸ್ತಾರವನ್ನು ನೀಡುತ್ತಿದ್ದಾರೆ. ಹೀಗೆ ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು - ಎಂಬ ಕವಿವಾಣಿಗೆ ಸಾಕ್ಷರೂಪವಾಗಿ ಆಲೋಚನೆ ಬೆಳೆಯುತ್ತಿರುವುದು ಅತ್ಯಂತ ನೆಮ್ಮದಿಯ ಮಾತಾಗಿದೆ. ತನ್ನ ಉದಯೋನ್ಮುಖ ಬೆಳವಣಿಗೆಗೆ ಹಿರಿ-ಕಿರಿಯ ಲೇಖಕ ಬಂಧುಗಳು ಕಾರಣರೆಂಬ ಋಣಿ ಭಾವದೊಂದಿಗೆ ಆಲೋಚನೆ ಮುಂದಿನ ಹೊಸ ಕನಸುಗಳನ್ನು ಹೊತ್ತು ಮುಂದಡಿಯಿಡುತ್ತಿದೆ. ಆದರೆ ಒಂದು ಕ್ರಿಯಾಶೀಲ ಪತ್ರಿಕೆ ಇಷ್ಟಕ್ಕೆ ತೃಪ್ತವಾಗಿ ಕುಳಿತುಕೊಳ್ಳುವುದಿಲ್ಲ, ಅಷ್ಟೇ ಅಲ್ಲಾ ಕುಳಿತು ಕೊಳ್ಳಬಾರದು ಕೂಡಾ. ಅದಕ್ಕೆಂದೆ ಆಲೋಚನೆ ಹೊಸ ಹೊಸ ಆಲೋಚನೆಗಳಿಗೆ ತನ್ನನ್ನು ತೆರದುಕೊಳ್ಳುವತ್ತ ಚಿಂತನ ಹರಿಸಿದೆ. ಈಗಾಗಲೇ ಕೃತಿಪರಿಚಯ, ಚಿತ್ರ ಕವನ ಅಂಕಣ, ದಿನದ ಆಲೋಚನೆ ಮುಂತಾದ ನಿರಂತರ ಅಂಕಣಗಳನ್ನು ಹೊರತಂದಿದೆ. ಅದೇ ರೀತಿ ಹೊಸ ಹೊಸ ಆಯಾಮದ ಕುರಿತು ಉಪಕ್ರಮಿಸುವ ಉದ್ದೇಶ ಆಲೋಚನೆಗಿದೆ. ಈ ಹಿನ್ನೆಲೆಯಲ್ಲಿ ಆಲೋಚನೆಯು ಹಿರಿಯ ಹಾಗೂ ಕಿರಿಯ ಲೇಖಕರುಗಳಿಂದಲ್ಲದೆ ಆಲೋಚನೆಯ ಓದುಗ ಬಂಧುಗಳಿಂದಲೂ ಸಹ ಸಲಹೆ ಸೂಚನೆಗಳನ್ನು ಸ್ವಾಗತಿಸುತ್ತಿದೆ. ಈ ನಿಟ್ಟಿನಲ್ಲಿ ತಮ್ಮ ಅಮೂಲ್ಯ ಅನಿಸಿಕೆ, ಸಲಹೆ -ಸೂಚನೆಗಳನ್ನು ನೀಡುವಂತೆ ಭಿನ್ನವಿಸುತ್ತಿದ್ದೇವೆ. ಅ. ಆಲೋಚನೆಯಲ್ಲಿ ಪ್ರಕಟವಾಗುವ ಬರಹಗಳ ಪ್ರಭೇದಗಳು ನಿಮಗೆ ಮೆಚ್ಚಿಗೆಯಾಗಿವೆಯೆ? ಏನಾದರೂ ಬದಲಾವಣೆಗಳನ್ನು ನೀವು ಅಪೇಕ್ಷಿಸುತ್ತಿರಾ? ಬ. ಆಲೋಚನೆಯಲ್ಲಿ ಬರುವ ಬರಹಗಳ ವಿನ್ಯಾಸ ಮತ್ತು ಪ್ರಸ್ತುತಿಯು ನಿಮಗೆ ಮೆಚ್ಚಿಗೆಯೆ? ಬದಲಾವಣೆ ಬಯಸುವುದಾದರೆ ನಿಮ್ಮ ಸಲಹೆಗಳೇನು ? ಕ. ಆಲೋಚನೆಯ ವಿನ್ಯಾಸ ಮತ್ತು ಅಕಾರದಲ್ಲಿ ಏನಾದರೂ ಬದಲಾವಣೆಯನ್ನು ಬಯಸುತ್ತೀರಾ? ಬ. ಪ್ರಕಟವಾದ ಬರಹಗಳನ್ನು ಹೆಚ್ಚು ಹೆಚ್ಚು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ನಿಮ್ಮ ಸಲಹೆ-ಸೂಚನೆಗಳೇನು? ಡ. ಬೇರೆ ಉಪಯುಕ್ತ ಸಲಹೆ ಸೂಚನೆಗಳಿಗೆ ಇದ್ದರೆ ಆಲೋಚನೆ ತೆರದ ಮನದಿಂದ ಸ್ವಾಗತ್ತಿಸುತ್ತದೆ. ಈ ನಿಟ್ಟಿನಲ್ಲಿ ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ಆಲೋಚನೆಯ ಪತ್ರಿಕೆಯ ವಾಟ್ಸಪ್ ಗ್ರೂಪನಲ್ಲಿ ಬರೆದು ತಿಳಿಸುವಂತೆ ವಿನಂತಿ. ಆಲೋಚನೆಯ ಮುಂದಿನ ಹಾದಿಯಲ್ಲಿ ತಮ್ಮ ಸಲಹೆ ಸೂಚನೆಗಳು ಸಹಕಾರಿ ಎಂಬ ಪ್ರಾಮಾಣಿಕ ಭಾವನೆ ನಮ್ಮದು. ವಂದನೆಗಳು. ಶ್ರೀಪಾದ ಹೆಗಡೆ, ಸಾಲಕೋಡ ಸಹ ಸಂಪಾದಕ
![ಆಲೋಚನೀಯ-13](https://static.wixstatic.com/media/84d600_3e0343d4862f4e10b64ebab0b5e05881~mv2.png/v1/fill/w_200,h_113,al_c,lg_1,q_85,enc_auto/Image-empty-state.png)