top of page

ಹಾಲ ಕೆನೆ ಬದುಕು







ಹುಟ್ಟುತ್ತಾರೆ ನಿತ್ಯ

ಸಾಯುತ್ತಾರೆ

ಲೆಕ್ಕಕ್ಕೆ ಸಿಗದ ಜನ

ನಡುವಿನ ಬದುಕಿನುದ್ದಕ್ಕೂ

ಇವರೆಲ್ಲ ಬದುಕಿದ್ದು

ಯಾರ ಖಬರಿಗೂ

ಬರುವುದೇ ಇಲ್ಲ

*

ಅಂಥ ಬದುಕಲ್ಲ

ನಮ್ಮಪುರಾಣಿಕರದು

ಪುರಾಣದ ಕೃಷ್ಣನ ಹಾಗೆ

ಎಲ್ಲರಿಗೂ ಬೇಕಾದ

"ಹಾಲು ಕೆನೆ" ಬದುಕು!

*

ನಾಡಿನ ಮನೆಮನೆಯ ಹೊಕ್ಕು

ಹೆಮ್ಮಕ್ಕಳ ಸುಖದು:ಖದ

ಕತೆ ಕೇಳಿ

ನಕ್ಕಾಗ ನಕ್ಕು, ಅತ್ತಾಗ ಅತ್ತು

ಹೃದಯಕ್ಕೆ ಹೃದಯ

ಸ್ಪಂದಿಸಿದ ಮಮತೆಯ

ಜೇನು- ಸಿಹಿ ಬದುಕು!

*

ನಾ ನೋಡಿದಾಗ

ಇವರ ತಲೆ ನರೆತು

ಮೈ ಮುಪ್ಪಾಗಿತ್ತು

ಮನಸ್ಸು ಮಾತ್ರ

ಹರೆಯದ ಹೊಸ ನಗು

ನಗುತ್ತಿತ್ತು

ಮಕ್ಕಳಂತೆ ಮುಗ್ಧವಾಗಿ

ಥಳಥಳಿಸುತ್ತಿತ್ತು

ತಿಳಿನಗೆಯ ಸೂಸಿ

ಕುಳ್ಳಿರಿಸಿ ಮಾತನಾಡುವ

ಆ ಬದುಕಿಗೆ

" ಬೆವರಿನ ಬೆಲೆ"

ತಿಳಿದಿತ್ತು.

*

ಗೋಕಾಕದ ಘಟಪ್ರಭೆ ಸೊರಗೀತು

ಪುರಾಣಿಕರು ಹರಿಬಿಟ್ಟ

ಸಾಹಿತ್ಯದ ತಿಳಿಗಂಗೆ

ಬತ್ತಲಾರದು ಈ ನೆಲದಲ್ಲಿ

ಸಾಹಿತ್ಯವೆಂಬ ಶಬ್ದ

ಇರುವವರೆಗೂ

ದೇಹ ಬೂದಿಯಾದರೇನು

ಈ ನಾಡಿನ ಮಣ್ಣಿನಲ್ಲಿ ಬೆಳೆವ

ಚೈತನ್ಯದ ಸಸಿಗಳಿಗೆಲ್ಲ

ಅದೇ ಗೊಬ್ಬರವಲ್ಲವೇ?


- ಎಲ್. ಎಸ್. ಶಾಸ್ತ್ರಿ


ಕೃಷ್ಣಮೂರ್ತಿ ಪುರಾಣಿಕರನ್ನು ನಮ್ಮ ಜಿಲ್ಲೆಗೆ ಪರಿಚಯಿಸಿದವರು ಎಲ್.ಎಸ್.ಶಾಸ್ತ್ರಿಯವರು.ಪುರಾಣಿಕರು ಬರೆದ 'ಸೈರಂಧ್ರಿ ಹಾಗು ಮಗನ ಗೆಲುವು' ನಮಗೆ ಪಿಯುಸಿಯಲ್ಲಿ ಪಠ್ಯವಾಗಿತ್ತು. ಸರಳ ರಗಳೆಯಲ್ಲಿ ಬರೆದ ಆ ನಾಟಕ ನಮ್ಮ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸಿತ್ತು. ಕುಟುಂಬ ವತ್ಸಲರಾದ ಅವರ ಕಾದಂಬರಿಗಳು ಕೌಟುಂಬಿಕ ಚಿತ್ರಣಗಳಿಂದ ಸಂಪನ್ನವಾಗಿರುವುದು ವಿಶೇಷ. ಹಾಲಿನ ಕೆನೆಯಂತೆ ಬದುಕಿದ ಪುರಾಣಿಕರ ಬಗ್ಗೆ ಕವಿ‌ ಎಲ್ ಎಸ್ ಎಸ್ ಬರೆದ ಭಾವಪೂರ್ಣ ಕವನ ನಿಮ್ಮ ಓದಿಗಾಗಿ. ಸಂಪಾದಕ.







21 views0 comments
bottom of page