ಹುಟ್ಟುತ್ತಾರೆ ನಿತ್ಯ
ಸಾಯುತ್ತಾರೆ
ಲೆಕ್ಕಕ್ಕೆ ಸಿಗದ ಜನ
ನಡುವಿನ ಬದುಕಿನುದ್ದಕ್ಕೂ
ಇವರೆಲ್ಲ ಬದುಕಿದ್ದು
ಯಾರ ಖಬರಿಗೂ
ಬರುವುದೇ ಇಲ್ಲ
*
ಅಂಥ ಬದುಕಲ್ಲ
ನಮ್ಮಪುರಾಣಿಕರದು
ಪುರಾಣದ ಕೃಷ್ಣನ ಹಾಗೆ
ಎಲ್ಲರಿಗೂ ಬೇಕಾದ
"ಹಾಲು ಕೆನೆ" ಬದುಕು!
*
ನಾಡಿನ ಮನೆಮನೆಯ ಹೊಕ್ಕು
ಹೆಮ್ಮಕ್ಕಳ ಸುಖದು:ಖದ
ಕತೆ ಕೇಳಿ
ನಕ್ಕಾಗ ನಕ್ಕು, ಅತ್ತಾಗ ಅತ್ತು
ಹೃದಯಕ್ಕೆ ಹೃದಯ
ಸ್ಪಂದಿಸಿದ ಮಮತೆಯ
ಜೇನು- ಸಿಹಿ ಬದುಕು!
*
ನಾ ನೋಡಿದಾಗ
ಇವರ ತಲೆ ನರೆತು
ಮೈ ಮುಪ್ಪಾಗಿತ್ತು
ಮನಸ್ಸು ಮಾತ್ರ
ಹರೆಯದ ಹೊಸ ನಗು
ನಗುತ್ತಿತ್ತು
ಮಕ್ಕಳಂತೆ ಮುಗ್ಧವಾಗಿ
ಥಳಥಳಿಸುತ್ತಿತ್ತು
ತಿಳಿನಗೆಯ ಸೂಸಿ
ಕುಳ್ಳಿರಿಸಿ ಮಾತನಾಡುವ
ಆ ಬದುಕಿಗೆ
" ಬೆವರಿನ ಬೆಲೆ"
ತಿಳಿದಿತ್ತು.
*
ಗೋಕಾಕದ ಘಟಪ್ರಭೆ ಸೊರಗೀತು
ಪುರಾಣಿಕರು ಹರಿಬಿಟ್ಟ
ಸಾಹಿತ್ಯದ ತಿಳಿಗಂಗೆ
ಬತ್ತಲಾರದು ಈ ನೆಲದಲ್ಲಿ
ಸಾಹಿತ್ಯವೆಂಬ ಶಬ್ದ
ಇರುವವರೆಗೂ
ದೇಹ ಬೂದಿಯಾದರೇನು
ಈ ನಾಡಿನ ಮಣ್ಣಿನಲ್ಲಿ ಬೆಳೆವ
ಚೈತನ್ಯದ ಸಸಿಗಳಿಗೆಲ್ಲ
ಅದೇ ಗೊಬ್ಬರವಲ್ಲವೇ?
- ಎಲ್. ಎಸ್. ಶಾಸ್ತ್ರಿ
ಕೃಷ್ಣಮೂರ್ತಿ ಪುರಾಣಿಕರನ್ನು ನಮ್ಮ ಜಿಲ್ಲೆಗೆ ಪರಿಚಯಿಸಿದವರು ಎಲ್.ಎಸ್.ಶಾಸ್ತ್ರಿಯವರು.ಪುರಾಣಿಕರು ಬರೆದ 'ಸೈರಂಧ್ರಿ ಹಾಗು ಮಗನ ಗೆಲುವು' ನಮಗೆ ಪಿಯುಸಿಯಲ್ಲಿ ಪಠ್ಯವಾಗಿತ್ತು. ಸರಳ ರಗಳೆಯಲ್ಲಿ ಬರೆದ ಆ ನಾಟಕ ನಮ್ಮ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸಿತ್ತು. ಕುಟುಂಬ ವತ್ಸಲರಾದ ಅವರ ಕಾದಂಬರಿಗಳು ಕೌಟುಂಬಿಕ ಚಿತ್ರಣಗಳಿಂದ ಸಂಪನ್ನವಾಗಿರುವುದು ವಿಶೇಷ. ಹಾಲಿನ ಕೆನೆಯಂತೆ ಬದುಕಿದ ಪುರಾಣಿಕರ ಬಗ್ಗೆ ಕವಿ ಎಲ್ ಎಸ್ ಎಸ್ ಬರೆದ ಭಾವಪೂರ್ಣ ಕವನ ನಿಮ್ಮ ಓದಿಗಾಗಿ. ಸಂಪಾದಕ.