top of page

ಸುಭದ್ರ ಭಾರತ ಕಟ್ಟೋಣ.

ಹಲವು ಮತಗಳ ಹಲವು ಭಾಷೆಗಳ

ಸಂಗಮ ಭಾರತ ನೆಲದಲ್ಲಿ.

ಬೇಧವ ತೊರೆದು ಸರಸದಿ ಬೆರೆಯುವ

ಒಲುಮೆಯ ಮೂಡಲಿ ಮನದಲ್ಲಿ.


ಕುಡಿಯುವ ಜಲವು ಸೇವಿಸು ಗಾಳಿಯು

ಹರಿಯುವ ರಕ್ತವು ಒಂದೇ..

ಸೇಡಲಿ ನಿತ್ಯ ಬಡಿದಾಟದ ನೃತ್ಯ

ಮನುಜನೆ ತೊರೆಯೋ ಇಂದೆ.


ಭಾರತ ಮಿನುಗಲಿ ಶಾಂತಿಯ ತೇರಲಿ

ಮೂಡಲಿ ನಮ್ಮಲಿ ಅರಿವು..

ಐಕ್ಯತೆ ಮಂತ್ರದಿ ಏಳ್ಗೆಯ ಬಯಸುತ

ನಡೆಯಲು ದೇಶಕೆ ಬಲವು.


ಉಳಿಯರು ಯಾರು ಶಾಶ್ವತ ಭುವಿಯಲಿ

ಸತ್ಯವ ತಿಳಿಯಲು ನಾವೆಲ್ಲಾ..

ಮನಸ್ಸಿನ ಕಲ್ಮಶ ಕಳೆಯಲು ನಮ್ಮಲಿ

ಸಮರಸ ಬಾಳುವೆ ಮುಂದೆಲ್ಲಾ.


ಭಾರತಮಾತೆ ಕೀರ್ತಿಯೂ ಶಾಶ್ವತ ಮಿನುಗಲಿ

ವಿಶ್ವದ ಮೂಲೆ ಮೂಲೆಯಲಿ..

ಕೈ ಕೈ ಜೋಡಿಸಿ ಒಂದೇ ಎನ್ನುವ

ಕೋಟೆಯ ಕಟ್ಟುವ ಮನಸ್ಸಿನಲ್ಲಿ.


ಸಾತುಗೌಡ ಬಡಗೇರಿ.

ಅಂಕೋಲಾ ಉ.ಕ.

61 views1 comment
bottom of page