top of page

ಮಿಂಚು ಹನಿಗಳು

ಭಟ್ಕಳದ ಬೈಲೂರಿನ ವೆಂಕಟೇಶ ಬೈಲೂರ ಅವರು ಸ್ಟೇಟ್ ಬ್ಯಾಂಕ ಆಫ್ ಇಂಡಿಯಾದಲ್ಲಿ ಉದ್ಯೋಗಿ. ಮಿಂಚು ಹನಿಗಳು ಅವರ ಎರಡನೇ ಹನಿಗವನ ಸಂಕಲನ.ಮುದ್ರಣ ಪೂರೈಸಿ ಬಹಳಷ್ಟು ಸಮಯವಾದರೂ ಕೊರೋನಾ ಕಾರಣದಿಂದ ಬಿಡುಗಡೆಯ ದರ್ದಿಗೆ ಕಾಲ ಕೂಡಿಬರುವ ಸಮಯಕ್ಕಾಗಿ ಕಾದಿರುವ ಕೃತಿ. ಖ್ಯಾತ ಚುಟುಕು ಕವಿ ಜರಗನಹಳ್ಳಿ ಶಿವಶಂಕರ್ ಅವರ ಮುನ್ನುಡಿ ಹಾಗು ಭಟ್ಕಳದ ಸಾಹಿತಿ ಶ್ರೀಧರ ಶೇಟ್ ಶಿರಾಲಿ ಅವರ ಬೆನ್ನುಡಿ ಇದೆ.ಬೆನ್ನುಡಿಯಲ್ಲಿ ಸಾಹಿತಿ ಶ್ರೀಧರ ಶೇಟ್ ಶಿರಾಲಿಯವರು ಹೇಳಿರುವಂತೆ ಬ್ಯಾಂಕ್ ಉದ್ಯೋಗಿಯಾಗಿ ತಮ್ಮ ವೃತ್ತಿಯ ಅರ್ಥವ್ಯವಸ್ಥೆ ( ಹಣಕಾಸು) ಮತ್ತು ಕನ್ನಡ ಶಬ್ದಗಳ "ಅರ್ಥ" ವ್ಯವಸ್ಥೆಗಳೆರಡರ ನಡುವೆ ಸಮತೋಲನ ಕಾಪಾಡಿಕೊಂಡಿದ್ದಾರೆ.


ಇಲ್ಲಿನ ಹನಿಗವಿತೆಗಳಲ್ಲಿ ಮಿಂಚಿದೆ,ಕೆಲವು ಕಡೆ ಗುಡುಗು ಸಹಿತ ಹನಿಮಳೆ ಇದೆ,ವ್ಯವಸ್ಥೆಯ ಟೀಕಿಸುವಲ್ಲಿ ಸಿಡಿಲಿದೆ, ರಾಜಕೀಯದ ಆಂತರ್ಯದಲ್ಲಿ ಅಡಗಿದ ಸ್ವಾರ್ಥ ಸಾಧನೆಯ ಬಗ್ಗೆ ಸಣ್ಣ ಕಿಡಿಯಿದೆ, ಪ್ರಕೃತಿಯ ಸೆರಗಿನಲ್ಲಿ ಕಂಡ ತಣ್ಣನೆಯ ಬೆಳದಿಂಗಳಿದೆ, ಪ್ರೇಮಿಗಳ ಕಣ್ಣಂಚಿನ ನವಿರು ಕನಸುಗಳಿವೆ, ದಾಂಪತ್ಯದ ಸವಿಯೂಟಕ್ಕೆ ಭೂರಿ ಭೋಜನ ವಿದೆ. ಓದುಗರೆದೆಗೆ ಕಚಗುಳಿಯಿಡುವ ತಿಳಿ ಹಾಸ್ಯ ವಿದೆ,ವಿಜೃಂಬಿಸುವ ಅರ್ಧಸತ್ಯದ ಮೊನಚಿಗೆ ತೀಕ್ಷ್ಣ ಕುಟುಕಿದೆ.

ಅರೆಬೆಂದ ರಾಜಕಾರಣದ ಬಗ್ಗೆ ಕವಿಯ ಚಾಟಿ ಈ ರೀತಿ ಇದೆ


ರಾವಣ ಕೀಚಕ

ದುರ್ಯೋಧನ ಕಂಸ

ಯಾವ ಪಾತ್ರವಾದರೂ

ಸೈ

ನಟನೆಯಲಿ ಇವರದು

ಸದಾ ಎತ್ತಿದ

ಕೈ?



ರಾಜಕಾರಣದಲ್ಲಿ ಇವರು

ಪಳಗಿದ್ದಾರೆ ತುಂಬ

ಹಾಗಾಗಿಯೆ

ಪಕ್ಷದೊಳಗೆ

ಇಡೀ ಕುಟುಂಬ


ಕೆಲ ಜನಪ್ರತಿನಿಧಿಗಳ

ಕೆಲಸದ ವೈಖರಿ

ಸದಾ ತುಂಬಿರುವಂತೆ

ತಮ್ಮ ತಿಜೋರಿ


ಸರಕಾರ ರಚನೆಯಾದಾಕ್ಷಣ

ಭಿನ್ನಮತ ಉಲ್ಬಣ

ಶಾಸಕರ ಖರೀದಿ

ರೆಸಾರ್ಟ್ ರಾಜಕಾರಣ

ನಡುವೆ ಬಿಡುವಿದ್ದರೆ

ಆಡಳಿತಕೆ ಗಮನ


ಇವರಂತಹ ರಾಜಕಾರಣಿಗಳ

ನಿಧನದಿಂದ

ತುಂಬಲಾರದ ನಷ್ಟ ಎಂದು

ಮಾಡುವರು ಗುಣಗಾನ, ನಿಜ

ಯಾರು ತುಂಬಿಸುತ್ತಾರೆ ಹೇಳಿ

ಅವರ ಅಧಿಕಾರಾವಧಿಯಲ್ಲಿ

ಬೊಕ್ಕಸಕ್ಕಾದ ನಷ್ಟ?


ಅಧಿಕಾರದಲ್ಲಿದ್ದಾಗ

ಅರಿತೊ ಅರಿಯದೆಯೋ

ಅನಂತ ಅನಾಚಾರ

ಘೋಷಣೆ ಮಾತ್ರ

ನಮ್ಮದು ಶುದ್ಧ

ಸರಕಾರ


ಚುನಾವಣೆಯಲ್ಲಿ ಗೆದ್ದವರೆ

ನಿರಂತರ ಮಾಡುತ್ತಿದ್ದಾರೆ

ಅಕ್ರಮ ಲೂಟಿ

ಬೀಸುವರಾರು

ಇವರ ವಿರುದ್ಧ ಚಾಟಿ?



ಪ್ರಕೃತಿಯ ಬೆರಗುಗಳಿಗೆ ತನ್ಮಯನಾಗದ ಕವಿ ಯಾರಿದ್ದಾರೆ ಹೇಳಿ? ಇಂತ ಪ್ರಕೃತಿಯ ವಿಸ್ಮಯಗಳಿಂದ ಪುಳಕಿತನಾದ ಕವಿಯ ಭಾವಕೋಶದಲ್ಲಿ ಮಿಂದೆದ್ದ ಕಲ್ಪನೆಯ ಮಿಂಚು ಇಲ್ಲಿ ಓದುಗರನ್ನು ಸೆರೆಹಿಡಿಯುವ ಪರಿ ನೋಡಿ.



ಕತ್ತಲೆಂದರೆ ಕಂಪಿಸುವುದೇನೊ

ಸೂರ್ಯನ ಪ್ರಾಣ

ಅದಕೆಂದೆ

ರಾತ್ರಿಯಾಗುವ ಮೊದಲೆ ಆತನ

ಚತುರ ನಿರ್ಗಮನ



ಹೊತ್ತಿಳಿವ

ಹೊತ್ತಿಗೆ

ಕತ್ತಲೆಯ

ಮುತ್ತಿಗೆ



ದುಂಬಿಗೆ ತನ್ನ

ತನುವನರ್ಪಿಸಿಕೊಂಡುದಕೆ

ಹೂವಿಗೆ ಬಸಿರು

ಫಲವೆಂಬ ಹೆಸರು



ಹಾಸ್ಯ ಕೂಡ ಹನಿಗವನಗಳಿಗೆ ಶೃಂಗಾರ. ಕವಿಯ ಹಾಸ್ಯಪ್ರಜ್ಞೆ ಭರಪೂರವಾಗಿ ಸಂಕಲನದುದ್ದಕ್ಕೂ ಹರಿದಿದೆ.



ದೇವ ಲೋಕದಲ್ಲಿ

ಶುರುವಾದರೆ

ಅಭಿಯಾನ ಮೀ ಟೂ

ಬೀಳುತ್ತದೆ

ದೇವೇಂದ್ರನದೆ

ಮೊದಲ ವಿಕೆಟ್ಟು



ಬರೆದು ಬರೆದು

ನನ್ನಾಕೆಯ ಮೇಲೆ

ಪ್ರೇಮ ಕವನ

ಓದಿ ಓದಿ ಅವಳು

ಬಿಗಿದಪ್ಪಿದಳು ನನ್ನ

ಪರಿಣಾಮ

ಒಂದರ ಹಿಂದೊಂದು ಮಕ್ಕಳ

ಜನನ



ಮಡದಿಯ ಮಾತಿಗೆ

ಎದುರಾಡದಿರೆ

ಜೊತೆಯಲಿ ಇರುವ ಯೋಗ

ಇಲ್ಲದಿರೆ

ಹೊರಗಡೆ ಖಾಯಂ ಜಾಗ



ಮದುವೆಗೂ ಮೊದಲು

ನನ್ನವಳು

ತೆಳ್ಳಗೆ ಬಳುಕುವ ಸುಕುಮಾರಿ

ನಂತರವೊ

ಉಹೂಂ ಹೇಳಲಾರೆ

Very Sorry



ಅದುವರೆಗೆ ನಿಶ್ಯಬ್ದವಾಗಿದ್ದ

ಬೆಡ್ ರೂಮಿನಲಿ

ಶುರುವಾಗಲು ಬಳೆಗಳ

ಮಾತು

ಮೌನ ಹೋಯಿತು ಕಾಲ್ಕಿತ್ತು



ಹಳ್ಳಿ ಮನೆಗೆ ರಾತ್ರಿ

ನೆಂಟರ ಆಗಮನ

ಗೂಡಿನೊಳಗಿನ ಕೋಳಿಗೆ

ನಿದ್ದೆಯಲ್ಲೇ ಹನನ


ಹಾಸ್ಯದ ಜೊತೆಗೆ ಗಂಭೀರ ಭಾವವನ್ನು ಉಕ್ಕಿಸುವ, ಓದುಗರ ವೈಚಾರಿಕಬದ್ಧತೆಯನ್ನು ಎಚ್ಚರಿಸುವ ಹನಿಗವನಗಳಿಗೇನೂ ಸಂಕಲನದಲ್ಲಿ ಬರಗಾಲವಿಲ್ಲ


ವೈರಿಯಾದರೂ

ಪಾಂಡವರಿಗೆ

ಕರ್ಣ

ಅದೇ ಬಳ್ಳಿಯ

ಪರ್ಣ



ಎಷ್ಟು ಚದರಡಿ ನೆಲವೊ

ತೋಟವೊ ಗದ್ದೆಯೊ

ನಂದನ ವನವೊ

ತುಂಬಿ ತುಳಿಕುವ ಸಿರಿಯೋ

ಜೀವ ಸೊರಗಿ

ಕೆಳಗುರುಳಿದಾಗ

ಮೂರಡಿ ಮಾತ್ರವೆ

ನೆಲೆಯೊ



ಸಹಸ್ರಾರು ಪೆಟ್ಟುಗಳನ್ನು

ತಾಳ್ಮೆಯಿಂದ ಸಹಿಸಿದ್ದಕ್ಕೆ

ಆ ಕಲ್ಲು

ವಿಶ್ವವಿಖ್ಯಾತ ಶಿಲಾಬಾಲಿಕೆ


ಎಷ್ಟೆಲ್ಲ ಹಾರಾಡಿ

ತೋರಿಸಿದರೂ

ಅಬ್ಬರ

ಮಣ್ಣಿಗಿಳಿದ ಮೇಲೆ

ಈ ದೇಹವೂ

ಬರಿ ಗೊಬ್ಬರ




ಒಡೆದ ಕನ್ನಡಿಯನು

ಬೆಸೆಯುವ ಪ್ರಯತ್ನ

ಸಫಲವಾದೀತೆ

ನಾವೆಷ್ಟೇ ಮಾಡಿದರೂ

ಯತ್ನ



ಹೀಗೆ ಸೀಮಿತ ಶಬ್ದಗಳಲ್ಲಿ ಅಪರಿಮಿತ ಅರ್ಥ ಹೊರಹೊಮ್ಮಿಸುವ ಇಲ್ಲಿನ ಹನಿಗವಿತೆಗಳು ಮನಸ್ಸಿಗೆ ನಾಟುತ್ತವೆ.ಬುದ್ಧಿ ಭಾವಗಳ ಸಂಗಮದಂತಿರುವ ಈ ಹನಿಗಳಲ್ಲಿ ಕವಿಯ ಭಾಷೆಯ ಮೇಲಿನ ಹಿಡಿತ, ಶಬ್ದಗಳ ಚಮತ್ಕಾರ, ಉದ್ದೇಶಪೂರ್ವಕವಾಗಿ ಅಲ್ಲದ ಸಹಜವಾಗಿ ಸಾಂದರ್ಭಿಕವಾಗಿ ಸ್ಪುರಿಸಿರುವ ಪ್ರಾಸಗಳು, ಕಲ್ಪನೆಯ ಮೂಸೆಯಿಂದ ಹೊರಬಿದ್ದ ನವಿರು ಭಾವದ ಅಭಿವ್ಯಕ್ತಿ, ಚಿಂತನಪ್ರಧಾನ ಸಾಲುಗಳು, ಕವಿಯ ಅಭ್ಯಾಸಬಲ ಹಾಗು ಪ್ರತಿಭೆಯ ಗಣಿಯಿಂದ ಹೊರತೆಗೆದ ಚಿನ್ನದ ಹೊಳಪಿನಂತೆ ಎದೆಯಾಳದಲ್ಲಿ ಸುಳಿಯೊಡೆದು ತಣ್ಣನೆಯ ತಂಗಾಳಿ ಬೀಸುತ್ತದೆ.ಕವಿ ಬೈಲೂರರವರಿಂದ ಇಂತ ಇನ್ನಷ್ಟು ಗಟ್ಟಿ ಕೃತಿ ರಚನೆಗೊಂಡು ಕನ್ನಡದ ಸಾರಸ್ವತಲೋಕದ ಶ್ರೀಮಂತಿಕೆಯೊಳಗೆ ಜಾಗ ಪಡೆಯಲಿ ಎಂದು ಹಾರೈಸುತ್ತೇನೆ.


ಮಂಜುನಾಥ ನಾಯ್ಕ ಯಲ್ವಡಿಕವೂರ






98 views0 comments
bottom of page