top of page

ಬಾಳ್ವೆಯ ಹಾದಿಯಲ್ಲಿ ಬೆಳಕು ಚೆಲ್ಲುವ ಮೌಲ್ಯಯುತ ಕೃತಿ - 'ಬಾಳ್ವೇಯೇ ಬೆಳಕು' 

ಪುಸ್ತಕ : ಬಾಳ್ವೇಯೇ ಬೆಳಕು 

ಲೇಖಕರು :ಡಾ.ಕೆ. ಶಿವರಾಮ ಕಾರಂತರು

ವಿತರಕರು: ಸಪ್ನ ಬುಕ್ ಹೌಸ್

ಬೆಲೆ: 60


ಬಾಳ್ವೇಯೇ ಬೆಳಕು ಕೃತಿ ಡಾ.ಕೆ .ಶಿವರಾಮಕಾರಂತರ ಪ್ರಮುಖ ಕೃತಿಯಲ್ಲೂಂದು . ಕಾರಂತರ ಕೃತಿಗಳು ವಿಶೇಷ ಮತ್ತು ವಾಸ್ತವಕ್ಕೆ ಹತ್ತಿರ.   ಈ ಕೃತಿಯಲ್ಲಿ ಒಟ್ಟು ಹದಿನಾಲ್ಕು ಅಧ್ಯಾಯಗಳಿವೆ ಕೊನೆಯ ಅಧ್ಯಾಯ ಉಪಸಂಹಾರಕ್ಕೆ ಮೀಸಲಾಗಿದೆ ಶೀರ್ಷಿಕೆ ಯಂತೆ ಇಡೀ ಕೃತಿ ಬದುಕಿನ ಪ್ರೀತಿಯನ್ನು ಸಾರುತ್ತದೆ ಬಾಳಿನ ಮಹತ್ವವನ್ನು ತಿಳಿಸುತ್ತದೆ ಎಳೆ ಎಳೆಯಾಗಿ. ಕೃತಿ ಚಿಕ್ಕದಾದರೂ ಇಲ್ಲಿ ಮೌಲ್ಯಗಳು ಮತ್ತು ತಿಳಿವಿನ ಹರಿವು ,ವ್ಯಾಪ್ತಿ ಆಗಾಧ . ಇದು ವಿಚಾರ ಸಾಹಿತ್ಯದ ಕೃತಿ. ಇಲ್ಲಿ ಇತಿಹಾಸ, ವಿಜ್ಞಾನ ಆರ್ಥಿಕತೆ, ವಿದೇಶದ ಹಿಟ್ಲರ್ ಆತನಿಂದ ಸಮಾಜಕ್ಕಾದ ಹಾನಿ ಒಂದೆಡೆಯಾದರೆ . ಬುದ್ದನ ನಂತರ ಎರಡುಸಾವಿರ ವರ್ಷಗಳ ಅಂತರದಲ್ಲಿ ಗಾಂಧಿಜಿಯಲ್ಲಿ ಕಂಡ ಬುದ್ದನ ಅಂತಃಕರಣ ಜನರನ್ನು ಮತ್ತು ಸಮೂಹವನ್ನು ತಿದ್ದಿ ಸಮಾಜದ ಏಳಿಗೆಗೆ ಕಾರಣವಾದ ಬಗೆ ಹೀಗೆ ಇಲ್ಲಿನ ವಿಚಾರ ಸರಣಿ ಜಗತ್ತಿನ ಎಲ್ಲ ಸ್ತರಗಳ ವರೆಗೂ ವಿಸ್ತರಿಸಿದೆ . ಹುಟ್ಟು - ಸಾವಿನ ಚಕ್ರದಲ್ಲಿ ಮಾನವ ಸಾವಿನ ಕುರಿತ ಚಿಂತೆಯನ್ನು ಹುಟ್ಟಿನಿಂದಲೇ ಮಾಡುತ್ತಾನೆ. ಅದನ್ನು ವೈಭವಿಕರಿಸಿದ್ದಾನೆ  , ಆದರೆ ಬಾಳನ್ನು ಕಡಾಗಾಣಿಸಿದ್ದಾನೆ ಎಂದು ಮರುಗುತ್ತಾರೆ. ಜೀವನದ ಕೌತುಕ , ಇಂದಿನ ಆನಂದವನ್ನು ಕಾಣದೆ ಭವಿಷ್ಯದ ಚಿಂತೆಯಲ್ಲಿ ನೊಂದು ಈ ಬದುಕನ್ನು ಮೂರು ದಿನದ್ದು ಎಂದು ಹೇಳುವದನ್ನು ಕಾರಂತರು ಬಹು ವಿರೋಧಿಸುತ್ತಾರೆ . ಯಾರೋ ಮಾಡಿಟ್ಟ ಸಂಪ್ರದಾಯದ ,ವಿಧಿವಿಧಾನಗಳಿಗೆ ಮೂಕವಾಗಿ ಒಪ್ಪಕೊಳ್ಳವ ಬದಲು .ನಮ್ಮ ತಿಳಿವನ್ನು ,ನಿಲುವನ್ನು ಗಟ್ಟಿಪಡಿಸಿಕೊಳ್ಳಬೇಕು ಎಂದು ಬಲವಾಗಿ ಹೇಳಿದ್ದಾರೆ .ಈ ಜೀವನದ ವ್ಯಾಪ್ತಿ ಹಿರಿಯದು ನಿಸರ್ಗಕ್ಕಿಂತ ಮಿಗಿಲಾದ ಪಾಠ ಶಾಲೆ ಇಲ್ಲ . ಅದರ ರಹಸ್ಯ ಅರಿತವರಿಲ್ಲ  ಆದೊಂದು ವಿಸ್ಮಯ ಲೋಕ ಇದನ್ನು ಕಾಣಲು ಹಣ ಅಥವ ಅಧಿಕಾರದ ಅವಶಕ್ಯತೆ ಇಲ್ಲ .ಮನೆಯ ಬಾಗಿಲಲ್ಲೆ ಪ್ರಕೃತಿಯ ಸೊಬಗ ಆನಂದಿಸಿ ಮನವನ್ನು ಹಗುರಾಗಿಸಿಕೊಳ್ಳಬಹುದು ಎಂಬ ವಾಸ್ತವದ ಸತ್ಯ ಹೇಳುತ್ತದೆ ಈ ಕೃತಿ . ಅಲ್ಲದೆ ದೇಹ ,ಮನಸ್ಸು ,ವ್ಯಕ್ತಿ , ಈ ಮೂರು ಸಂಗತಿಗಳಿಂದ ಒಂದು  ಸಮುದಾಯಕ್ಕೆ ಬೀರುವ ಪರಿಣಾಮಗಳು ಮತ್ತು ಸಮಾಜಕ್ಕೆ ಆಗುವ ಲಾಭ , ಮನದ ಉದ್ವೇಗ , ಸ್ವಾರ್ಥ ದ ಸೆಳೆತ ಇದರ ಅಪಾಯ ,ಹೀಗೆ ಹಲವಾರು ವಿಚಾರಗಳ ಸರಣಿಗಳನ್ನು ಈ ಕೃತಿ ಓದುಗರ ಮುಂದೆ ಇಡುತ್ತದೆ . ಸಮಾಜ ,ನಾಗರೀಕತೆಗಳ ಹುಟ್ಟು ,ಹಣದ ಪ್ರಾಮುಖ್ಯತೆ ಹಣವೇ ನಾಗರೀಕತೆಯ ಸಮಾಧಿಗೆ ಕಾರವಾಗುತ್ತದೆ . ಮನುಜರಲ್ಲಿ ವಿರಸಕ್ಕೂ ಕಾರಣವಾಗುತ್ತದೆ .ವ್ಯಕ್ತಿ ಏಕನಾದರೂ ಅವನು ತನ್ನ ನಡೆನುಡಿಗಳಿಂದ ಮೌಢ್ಯವನ್ನು ತೊರೆದು ತಾನು ಬೆಳೆದು ಇತರರ ಬಾಳಿಕೆ ಬೆಳಕಾದ ದಿವ್ಯ ಚೇತನಗಳು ಬದುಕಿಗೆ ಸಮಾಜ ಋಣಿ ಯಾಗ ಬೇಕು ಎಂಬ ಕಳಕಳಿಯಿದೆ . ಇಲ್ಲಿ ಚರ್ಚೆ ಯಾದ ವಿದ್ಯಮಾನಗಳು ಸಮಕಾಲೀನ ಸಂದರ್ಭಗಳಿಗೊ ಸಾಮ್ಯತೆಯಾಗುತ್ತವೆ . ಓದುಗರಲ್ಲಿ ಆಳವಾದ ಚಿಂತನಾ ಲಹರಿಯನ್ನು ಮೇಳೈಸುತ್ತದೆ . ಈ ಬದುಕು ನಿರಂತರ. ಹುಟ್ಟು ಸಾವು ತಾತ್ಕಾಲಿಕ ಎಂಬ ವಿಚಾರ ಬದುಕಿನ ಒಳನೋಟದ ಅರಿವನ್ನು ತಾರ್ಕಿಕ ಆಲೋಚನೆಯನ್ನು ನೀಡುತ್ತದೆ  . ಬದುಕಿನ ಗಾಢತೆಯನ್ನು ಇಲ್ಲಿನ ಮಾನವೀಯ ಮುಖವನ್ನು , ಒಳಿತು - ಕೆಡಕುಗಳಲ್ಲಿ ಬೆರೆತು ಬಾಳಿನ ಪರಿಕಲ್ಪನೆಯನ್ನು ತಿಳಿಯಲು ಈ ಕೃತಿ ಪ್ರೇರೇಪಿಸುತ್ತದೆ . ಕೃತಿಯಲ್ಲಿ ಚರ್ಚಿಸದ ಆಯಾಮಗಳು ಇಲ್ಲ ಎನ್ನುವಷ್ಟು ಇಲ್ಲಿನ ವಿಚಾರ ಓದುಗರಿಗೆ ಬೆರಗು ನೀಡುತ್ತದೆ . ಈ ಜೀವನ ನಿರಾಶೆ , ಸೋಲು,ಅವಮಾನ, ಹೆಜ್ಜೆ ಹೆಜ್ಜೆಗೂ ಸಂಕಷ್ಟ ಎನ್ನುವ ಮೊದಲು 'ಬಾಳ್ವೇಯೇ ಬೆಳಕು' ಕೃತಿ ಓದಲೇಬೇಕು .ಇಲ್ಲಿರುವ ಸಮೃದ್ಧ ತಿಳಿವಿನ ಸಾರವನ್ನು ಮನಗಾಣಬೇಕು .             

                





-ರೇಶ್ಮಾ ಗುಳೇದಗುಡ್ಡಾಕರ್

22 views0 comments
bottom of page