top of page

ಬಾಪೂಜಿ ೧೫೦

ಮೋಹನ್ ದಾಸ ನೀನು ಪೋರಬಂದರಿನಲ್ಲಿ

ಜನಿಸಿ ಬೋಧಿ ವೃಕ್ಷವಾಗಿ ಬೆಳೆದು ಜಗದ

ಉದ್ದ ಅಗಲಕೆ ನಿನ್ನ ರೆಂಬೆ ಕೊಂಬೆಗಳನು

ಚಾಚಿದೆ. ಬಲುದೊಡ್ಡ ಸತ್ಯ ಅತ್ಯಂತ ಸರಳ

ಎಂಬ ಮಾತಿಗೆ ಮಾದರಿಯಾದ ಮಹಾತ್ಮ ನೀನು

ಬಾಪೂಜಿ ನಿನ್ನ ಜೀವನವೆ ಸಂದೇಶವೆಂದು ಸಾರಿ

ನುಡಿದಂತೆ ನಡೆದ ಧೀಮಂತ ಹೃದಯ ಶ್ರೀಮಂತ

ಆಂಗ್ಲರ ಸತ್ತೆಯನು ಅಹಿಂಸೆ ಅಸಹಕಾರ ಸತ್ಯಾಗ್ರಹ

ವೆಂಬ ತ್ರಿಶೂಲದಲಿ ತರಿದು ಹಾಕಿ ಭಾರತಾಂಬೆಗೆ

ಮುಕ್ತಿ ಸಂಪದವನಿತ್ತ ಪುಣ್ಯ ಮಹಿಮನು ನೀನು

ಹಿಂಸೆ ನೋವುಅಪಮಾನದ ವಿಷವೀಂಟಿ ನೀಲಕಂಠ

ಗೋಡ್ಸೆಯ ಗುಂಡಿಗೆ ಗುಂಡಿಗೆಯೊಡ್ಡಿದಾಗಲೂ

ಹೇ ರಾಮ ಮರಣದಲ್ಲಿಯು ಶರಣನಾದ ಯೋಗಿ

ಒಂದಿಷ್ಟು ಹಟಮಾರಿತನ ಛಲ ಬಿಡದ ಜಿಗುಟುತನ

ಜಗದೋದ್ಧಾರದ ಮಹಾಮಂತ್ರದ ಮಹಾ ಮಹಿಮ

ಕಿಂದರಿ ಜೋಗಿಯ ಬೆನ್ನ ಹಿಂದೆ ಸ್ವಾತಂತ್ರ್ಯ ಸೇನಾನಿಗಳ ದಂಡು

ಬ್ರಿಟಿಷರಿಗೆ ಎದೆ ನಡುಕ ಹುಟ್ಟಿಸಿದ ಸ್ವಾತಂತ್ರ್ಯ ಸಮರದ ಸೇನಾನಿ

ಗಾಂಧೀಜಿ ಮಹಾತ್ಮಾ ಬಾಪೂಜಿ ರಾಷ್ಟ್ರಪಿತ

ಪದ ಪದವಿಗಳನು ತೆಗೆದು ಬಿಸಾಡಿ

ರಾಮ ನಾಮ ಚರಕ ಖಾದಿಯ ಸಾಂಗತ್ಯ

ದೇಸಿಯತೆ ಗ್ರಾಮ ಸ್ವರಾಜ್ಯದ ಮಂತ್ರ

ಈಶ್ವರ ಅಲ್ಲಾ ತೇರೊ ನಾಮ್

ಸಬಕೊ ಸನ್ಮತಿ ದೇ ಭಗವಾನ್

ಗಾಂಧಿ ಎಂದರೆ ಒಂದು ಮಂತ್ರ ಮತ್ತು ಮಂತ್ರದಂಡ

ತಿಳಿ ನೀಲದಲ್ಲಿ ತಾ ನೀಲವಾಗಿ ಹೋದವನ

ದಾರಿಯ ಬೆಳಕಿನಲ್ಲಿಸಾಗೋಣ

ಆತ್ಮಸಾಕ್ಷಿಯ ನಿಚ್ಚಳವಾಗಿಟ್ಟು ಗಾಂಧಿ ಮಾರ್ಗದಲಿ

ಕೆಡುಕ ಮೆಟ್ಟುತ ಒಳಿತ ಕಟ್ಟುತ ಮುನ್ನಡೆಯೋಣ


- ಶ್ರೀಪಾದ ಶೆಟ್ಟಿ.

31 views0 comments
bottom of page