top of page

ನಮ್ಮೊಳ ಪರಕೀಯರು

ಮತ ನಮ್ಮದಾದಂತೆ ಮತಿಯೂ ನಮ್ಮದಿರಬೇಕು

ಸರಕಾರ ನಮ್ಮದಾದಂತೆ ಅಧಿಕಾರಿಯೂ ನಮ್ಮವರಾಗಿರಬೇಕು.....


ಸರಕಾರದ ಸವಲತ್ತುಗಳ ಹೊತ್ತ ಬಸ್ಸು

ಪ್ರಜೆಗಳ ಸೇವೆಗೆ ಬದ್ಧವಾದರೂ

ಹಲವು ನುಂಗಣ್ಣ ನಿಲ್ದಾಣದಿ ಸೊರಗುತ್ತ

ಜನತೆಯ ಕೊನೆ ನಿಲ್ದಾಣಕೆ ಕಾಲಿ‌ಕಾಲಿ...


ಸರಕಾರದ ಕಛೇರಿಯ ಸೇವೆಯು

ಶ್ರೀಸಾಮಾನ್ಯರ ಕಲ್ಯಾಣವಾದರೂ

ಕಾಲಿನ ಎಕ್ಕಡ ಸವೆಯುವಂತೆ

ಒಂದು ಸಹಿಗೆ ಹತ್ತು ಬಾರಿ ಅಲೆಸುವ

ಕರಿ ಬಣ್ಣದ ಬ್ರಿಟೀಷರಿಹರು...


ಸರಕಾರದ ಧೋರಣೆಗಳೆಲ್ಲವೂ

ಸಮಾಜದ ಏಳ್ಗೆಗಾದರೂ

ಧನಸೋರಿಕೆಯ ತೂತುಕೈಗಳಿಹ

ಸ್ವಾರ್ಥದ ಕಪ್ಪು ಮೂತಿಯ ಕೋತಿಗಳಿಹರು...


ಸರಕಾರದ ಅಧಿಕಾರಿಗಳ ಸೇವೆಗೆ

ವೇತನದ ಸಂಭಾವನೆಯಿದ್ದರೂ

ಸಂಬಳಕೆ ಗಿಂಬಳದಾಸೆಯಲಿ ಬಡವನ

ಕಣ್ಣಲಿ ರಕ್ತ ತರುವ ಇಂಗ್ಲೀಷರಿಹರು...


ಸರಕಾರದ ಲೋಕದಿಂದ ಗ್ರಾಮದವರೆಗೂ

ಭಾರತಿ ಉದರದ ಕುಡಿಗಳೇ ಆದರೂ

ಹಣಕೆ ಹೆಗ್ಗಣಗಳಾಗಿ ಬಿಲ ತೆಗೆವ

ದೇಶವನೆ ಕೊಳ್ಳೆಹೊಡೆವ ಕಳ್ಳರಿಹರು....

ಸ್ವಕೀಯದ ಸೋಗಿನಲಿ ಪರಕೀಯರಿಹರು....


ಭವಾನಿ ಗೌಡ (ಭುವಿ)

ವಿಜಯಪುರ



ಭುವಿ ಎಂಬ ಕಾವ್ಯನಾಮದಿಂದ ಪರಿಚಿತರಾಗಿರುವ ಭವಾನಿ ಗೌಡ ಅವರು ಹೊನ್ನಾವರ ತಾಲೂಕಿನ ಗುಣವಂತೆ ಊರಿನವರು. ವಿಜಯಪುರ ಜಿಲ್ಲೆಯ ಕೊಲ್ಹಾರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವುದರೊಂದಿಗೆ ಕಾವ್ಯ ಕ್ರಿಯೆಯಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದಾರೆ.ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕರು.

36 views0 comments
bottom of page