top of page

ನೀನಾರಿಗಾದೆಯೋ ಎಲೆ ಮಾನವಾ

ಗೋವಿನ ಕುರಿತು ಈ ಒಂದು ಅದ್ಭುತ ಕವನ ಬರೆದ ಕವಿ ಎಸ್. ಜಿ. ನರಸಿಂಹಾಚಾರ್ಯರು. ಕೃತಘ್ನ ಮನುಷ್ಯರಿಗೂ ಈ ಕವನ ಸಂಬಂಧಿಸುತ್ತದೆ. ಆ ಹಳೆಯ ಕವನದ ಮರು ನೆನಪು


ನೀನಾರಿಗಾದೆಯೋ ಎಲೆ ಮಾನವಾ

**********

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ

ಸುಟ್ಟರೆ ನೊಸಲಿಗೆ ವಿಭೂತಿಯಾದೆ

ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ

ನೀನಾರಿಗಾದೆಯೋ ಎಲೆ ಮಾನವಾ..‌

ಹರಿ ಹರೀ ಗೋವು ನಾನು|| ೧||


ಹಾಲಾದೆ ಕರೆದರೆ, ಮೊಸರಾದೆ ಹೆತ್ತರೆ

ಮೇಲೆ ಕೆನೆಗಡೆದರೆ ಬೆಣ್ಣೆಯಾದೆ

ಮೇಲಾದೆ ತುಪ್ಪವೂ ನಾನಾದೆ ಕಾಸಿದರೆ

ನೀನಾರಿಗಾದೆಯೋ ಎಲೆ ಮಾನವಾ||೨||


ಉಳುವೆ ನಾ ಭೂಮಿಯನು, ಹೊರುವೆ ನಾ ಹೇರನ್ನು

ತುಳಿದು ಕಡ್ಡಿಯ ನಾ ವಿಂಗಡಿಸುವೆ

ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ

ನೀನಾರಿಗಾದೆಯೋ ಎಲೆ ಮಾನವಾ||೩||


ಹಾಯೆ ಹರಿಗೋಲಾದೆ, ರಾಯಭೇರಿಗೆಯಾದೆ

ರಾಯರಾ ಕಾಲಿಗೆ ಮುಳ್ಳೊತ್ತುವಾದೆ

ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ

ನೀನಾರಿಗಾದೆಯೋ ಎಲೆ ಮಾನವಾ||೪||


ಹಾದಿಬೀದಿಯಲಿರುವ ಕಸದ ಹುಲ್ಲನು ಹುಡುಕಿ

ಮೇದು ಮನೆಗೈದಿ ನಾನಮೃತವೀವೆ

ಅದನುಂಡು ನನಗೆರಡ ಬಗೆವ ಮಾನವ ಹೇಳು

ನೀನಾರಿಗಾದೆಯೋ ಎಲೆ ಮಾನವಾ||೫||


- ಎಸ್. ಜಿ. ನರಸಿಂಹಾಚಾರ್

( ನರಸಿಂಹಾಚಾರ್ ಅವರು ಶ್ರೀರಂಗಪಟ್ಟಣದವರು. ಕೇವಲ ೪೫ ವರ್ಷ ಬದುಕಿದ ಅವರು ಘನ ವಿದ್ವಾಂಸರೂ ಹೌದು. ಅವರ ಬಗ್ಗೆ ಪ್ರತ್ಯೇಕ ಬರೆದಿರುವೆ)

862 views0 comments
bottom of page