top of page

ನಾಟ್ಯಶಾಸ್ತ್ರ ಪರಂಪರೆ ಮತ್ತು ಪ್ರಾಸಂಗಿಕತೆ - ಒಂದು ಅವಲೋಕನ


ಅಭಿನವ ಹೊಸ ಪುಸ್ತಕ...

ನಾಟ್ಯಶಾಸ್ತ್ರ ಪರಂಪರೆ ಮತ್ತು ಪ್ರಾಸಂಗಿಕತೆ

ಹಿಂದಿಮೂಲ: ಪ್ರೊ. ರಾಧಾವಲ್ಲಭ ತ್ರಿಪಾಠಿ

ಕನ್ನಡಕ್ಕೆ: ಅತ್ತಿಮುರುಡು ವಿಶ್ವೇಶ್ವರ

..........................

ಭರತನ ನಾಟ್ಯಶಾಸ್ತ್ರದ ಮೇಲೆ ಬೇರೆ ಬೇರೆ ಭಾಷೆಗಳಲ್ಲಿ ಮಂಡಿತವಾದ ಪ್ರಬಂಧಗಳು, ವ್ಯಾಖ್ಯಾನಗಳು, ವಿಶ್ಲೇಷಣೆಗಳು ವಿಚಾರ ಸಂಕಿರಣಗಳಲ್ಲಿ ನಡೆದ ಚರ್ಚೆಗಳು ಕನ್ನಡದಲ್ಲಿ ಆಗಿಲ್ಲವೆಂದು ಭಾವಿಸುತ್ತೇನೆ. ನಾಟ್ಯಶಾಸ್ತ್ರದ ಮೇಲೆ ಕನ್ನಡದಲ್ಲಿ ಬಂದ ಕೃತಿಗಳ ಸಂಖ್ಯೆಯೂ ಕಡಿಮೆಯೇ. ಆದರೆ ಯಕ್ಷಗಾನವೂ ಸೇರಿದಂತೆ ಭಾರತದ ವಿವಿಧ ಪ್ರಾದೇಶಿಕ ಪ್ರದರ್ಶನ ಕಲೆಗಳ ಶಾಸ್ತ್ರೀಯತೆಯನ್ನು ಗುರುತಿಸುವಾಗ ನಾಟ್ಯಶಾಸ್ತ್ರದ ಉಲ್ಲೇಖ ಮಾಡದೆ ಇರಲು ಸಾಧ್ಯವೇ ಇಲ್ಲ. ದೇಶದ ಬಹುತೇಕ ಪ್ರದರ್ಶನ ಕಲೆಗಳ ಬೀಜ, ಬೇರು ನಾಟ್ಯಶಾಸ್ತ್ರದ್ದಾಗಿದೆ. ಅಂಥ ಅನೇಕ ಕಲೆಗಳ ಅಧ್ಯಯನದ ಮೇಲಿನ ಉನ್ನತ ಕೃತಿಗಳ ಸಾಲಿನಲ್ಲಿ ಡಾ. ರಾಧಾವಲ್ಲಭ ತ್ರಿಪಾಠಿಯವರ ಕೃತಿಗಳು ನಿಲ್ಲುತ್ತವೆ. ಅವರು ನಾಟ್ಯಶಾಸ್ತ್ರದ ಮೇಲೆ ಮಾಡಿದ ಉಪನ್ಯಾಸಗಳ ಸಂಗ್ರಹವನ್ನು ಶ್ರೀ ಅತ್ತಿಮುರುಡು ವಿಶ್ವೇಶ್ವರ ಅವರು ಕನ್ನಡಕ್ಕೆ ಭಾಷಾಂತರ ಮಾಡಿಕೊಟ್ಟಿದ್ದಾರೆ. ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಭಗವತ್ಪಾದ ಪ್ರಕಾಶನವೂ ‘ನಾಟ್ಯಶಾಸ್ತ್ರ ವಿಚಾರ’ ಎಂಬ ಹೆಸರಿನಲ್ಲಿ ಡಾ. ತ್ರಿಪಾಠಿಯವರ ಒಂದು ಪುಸ್ತಕವನ್ನು ಪ್ರಕಟಿಸಿದ್ದಾರೆ. ಇದು ಕನ್ನಡ ಪ್ರದರ್ಶನ ಕಲಾಪ್ರಪಂಚಕ್ಕೆ ಅಮೂಲ್ಯ ಕೊಡುಗೆಯಾಗಿದೆ. ಇದೀಗ ಶ್ರೀ ಅತ್ತಿಮುರುಡು ವಿಶ್ವೇಶ್ವರ ಅವರ ಈ ಕೃತಿಯನ್ನು ಪ್ರತಿಷ್ಠಿತ ಸಂಸ್ಥೆ ಅಭಿನವ ಪ್ರಕಟಿಸುತ್ತಿರುವುದು ಪ್ರಶಂಸನೀಯ.


ಈ ‘ನಾಟ್ಯಶಾಸ್ತ್ರ ಪರಂಪರೆ ಮತ್ತು ಪ್ರಾಸಂಗಿಕತೆ’ ಕೃತಿಯು ಚಿಕ್ಕದಾದರೂ ನಾಟ್ಯಶಾಸ್ತ್ರದ ಕುರಿತಾಗಿ ವಿಶ್ಲೇಷಣಾ ನೋಟವನ್ನು ನೀಡುವುದಲ್ಲದೆ; ಯಕ್ಷಗಾನ ಸೇರಿದಂತೆ ವರ್ತಮಾನದಲ್ಲೂ ಶಾಸ್ತ್ರೀಯತೆಯನ್ನುಳಿಸಿಕೊಂಡು ಬೆಳೆದುಬಂದಿರುವ ಭಾರತದ ಎಲ್ಲ ಪ್ರದರ್ಶನ ಕಲೆಗಳಲ್ಲಿ ಕಳಚಿರುವ ಪಾರಂಪರಿಕ ಕೊಂಡಿಗಳನ್ನು ಜೋಡಿಸಿಕೊಳ್ಳಲು ಅಥವಾ ಅರ್ಥೈಸಿಕೊಳ್ಳಲು ಅತ್ಯಂತ ಯೋಗ್ಯವಾಗಿದೆ. ಈ ಕೃತಿಯಲ್ಲಿ ನಾಟ್ಯಶಾಸ್ತ್ರ ಪರಂಪರೆಯನ್ನು ಉಲ್ಲೇಖಿಸುತ್ತಾ `ನಾಟ್ಯಶಾಸ್ತ್ರ ಮತ್ತು ಸಂಸ್ಕೃತ ನಾಟಕವಿರದ ಭರತವರ್ಷವು ಉಂಗುರ ಕಳೆದುಹೋಗಿರುವ ಶಕುಂತಲೆಯಂತೆ. ನಾಟ್ಯಶಾಸ್ತ್ರ ಮತ್ತು ಸಂಸ್ಕೃತ ನಾಟಕಗಳೊಂದಿಗಿನ ಭಾರತವು ಕಳೆದುಹೋದ ಉಂಗುರವು ದುಷ್ಯಂತನಿಗೆ ದೊರಕಿದಂತಿರುತ್ತದೆ’ ಎಂದು ಡಾ. ತ್ರಿಪಾಠಿಯವರು ಉದ್ಗರಿಸಿದ್ದನ್ನು ಅತ್ತಿಮುರುಡು ಅವರು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ.


ಇದು ಉಪನ್ಯಾಸ ಮಾಲಿಕೆಯಾದುದರಿಂದ ಪ್ರಧಾನ ಶೀರ್ಷಿಕೆಯೆಂದು ಪ್ರತ್ಯೇಕವಾಗಿಲ್ಲ. ಎಲ್ಲವೂ ಉಪಶೀರ್ಷಿಕೆಗಳೇ ಆಗಿವೆ. ನಾಟ್ಯಶಾಸ್ತ್ರದ ಪ್ರಯೋಜನ ಸಂಬಂಧ ನಿರೂಪಣೆ, ನಾಟ್ಯಶಾಸ್ತ್ರದ ವಸ್ತು, ಸಂರಚನಾತ್ಮಕ ಅನ್ವಿತಿ (ಸಂಬಂಧ), ವೈಶ್ವಿಕ (ಜಾಗತಿಕ), ಏಕಾತ್ಮತಾ ಮೂಲ ಅನ್ವಿತಿ, ನಾಟ್ಯಶಾಸ್ತ್ರದ ಮೂರು ಪರಂಪರೆಗಳು, ನಾಟ್ಯದ ಚತುಷ್ಠಯೀ, ಪಂಚತಯೀ, ನಾಟ್ಯ ಮತ್ತು ನಾಟ್ಯವೇದ ಹೀಗೆ ಅನೇಕ ವಿಚಾರಗಳನ್ನು ಡಾ. ತ್ರಿಪಾಠಿಯವರು ಪ್ರಾಸಂಗಿಕ ದೃಷ್ಠಿಕೋನದಿಂದ ನೋಡಿರುವುದನ್ನು ಅಷ್ಟೇ ಮುತುವರ್ಜಿಯಿಂದ ಶ್ರೀ ಅತ್ತಿಮುರುಡು ವಿಶ್ವೇಶ್ವರರು ಕನ್ನಡಕ್ಕೆ ತಂದಿದ್ದಾರೆ. ಯಕ್ಷಗಾನ ಪ್ರದರ್ಶನದ ರೂಢಿ ಪರಂಪರೆಯಲ್ಲಿ ನಾಟ್ಯಶಾಸ್ತ್ರದ ನೇರವಾದ ಅನ್ವಿತಿಯಿರುವುದನ್ನು ಈ ಕೃತಿಯಲ್ಲಿ ವಿಭಿನ್ನ ರೀತಿಯಲ್ಲಿ ತಿಳಿಸಿಕೊಡಲಾಗಿದೆ. ಇಂಥ ಅನೇಕ ಕಾರಣಗಳಿಂದ ಈ ಕೃತಿ ಕನ್ನಡಕ್ಕೆ ಬಂದಿರುವುದನ್ನು ಅಮೂಲ್ಯ ಕೊಡುಗೆ ಎಂದು ಅಭಿಮಾನದಿಂದ ಹೇಳಬಹುದು, ಗೌರವದಿಂದ ಸ್ವಾಗತಿಸಬಹುದು.

[ ಪುಸ್ತಕ ಖರೀದಿಸಲು: https://imojo.in/1zaxsbf ]








- ಅಶೋಕ ಹಾಸ್ಯಾಗಾರ




22 views1 comment
bottom of page