top of page

ತುಡಿತ -ಮಿಡಿತ

ನನ್ನ "ತುಡಿತ -ಮಿಡಿತ" ಕವನ ಸಂಕಲನದ ಒಂದು ಕವನ....

ಈ ಸಂದರ್ಭದಲ್ಲಿ ....

ಪುನೀತ್ ರವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ.... 🙏

ಮೃತ್ಯುವಿಗೆ.....

*****

ಸಾವೇ ನೀನೆಷ್ಟು ನಿರ್ದಯಿ

ಬೇಕೆಂದು ಬಯಸಿದವರ

ಸನಿಹಕ್ಕೂ ಸುಳಿಯುವುದಿಲ್ಲ!

ಬೇಡವೆಂದು ಪರಿಪರಿಯಾಗಿ

ಬೇಡಿದರೂ ಬಿಡುವುದಿಲ್ಲ!!

ಕಿಂಚಿತ್ತೂ ಕರುಣೆಯಿಲ್ಲದ

ಪಾಷಾಣ ಹೃದಯಿ!!


ಸಂಬಂಧಗಳ ಬೇರ್ಪಡಿಸಿ

ಅಸಹಾಯಕತೆ - ಅಳಲಿನ

ಸೌಧವನ್ನೇ ಸೃಷ್ಟಿಸುತ್ತ...

ಅನಿಶ್ಚಿತತೆ - ಅನಿರೀಕ್ಷಿತ -

ಅವಘಡಗಳ ಅವಲೋಕನಗೈಯುತ್ತಾ

ಸಂಭ್ರಮಿಸುತಿಹೆ ಏಕೇ????


ಪರರ ಸಂತಸದಲ್ಲೇ ಸುಖವನರಸುವ,

ಆ ಪರಿಗೆ, ನೀ......

ಹೊರತಾಗಿರುವಿಯೇಕೆ????


ಇರಲಿ ಬಿಡು,

ನನ್ನ ತರ್ಕಕ್ಕೆ ಉತ್ತರಿಸಲೇ ಬೇಕೆಂಬ,

ಹಂಬಲವೇನಿಲ್ಲ ;

ಎಲ್ಲ ಪ್ರಶ್ನೆಗಳಿಗೂ

ಉತ್ತರ ಸಿಗುವುದೂ ಇಲ್ಲ ;


ಮೃತ್ಯುವ ಇಲ್ಲವಾಗಿಸಿ

ಅಮರತ್ವವನೇ ನೀಡೆ0ಬ

ಮನವಿಯೂ ನನ್ನದಲ್ಲ...!!


ಕಂಬನಿಯ ಒರೆಸುವ ಕರವಾದರೂ ಆಗು ;

ಅಂಧಕಾರವ ತೊಡೆದು

ಗುರಿಯತ್ತ ಮುನ್ನಡೆಸುವ

ಪಥಿಕನಾದರೂ ಆಗು ;

ಸದ್ಭಾವ- ಸದಿಚ್ಛೆ - ಸಕರ್ಮಗಳೆಡೆ

ಸಾಗಿಸುವ ಸಾಧನವಾದರೂ ಆಗು :


ಪಾಶ ಬೀಸುವ ಮುನ್ನ,

ವ್ಯಕ್ತಿ - ಸ್ಥಿತಿ - ಕಾಲವ ಪರಿಗಣಿಸು ;

ಅಂತರಂಗದ ಕೋರಿಕೆಯ

ನೇಪಥ್ಯಕ್ಕೆ ಸರಿಸದೇ.....!!


ಸಾವಿತ್ರಿ ಶಾಸ್ತ್ರಿ, ಶಿರಸಿ.


77 views2 comments
bottom of page