top of page

ಗುರುಗಳಿಗೆ ಅಭಿನಂದನೆ

ನನ್ನ ಮೆಚ್ಚಿನ ಗುರುಗಳಾದ ಶ್ರೀ ಶ್ರೀಪಾದ ಶೆಟ್ಟರಿಗೆ,

ವಂದನೆಗಳು.

ನಿಮ್ಮನ್ನು ೨೩ ನೇ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ನಾನು ಅಪರಮಿತ ಸಂತೋಷವನ್ನು ಹೊಂದಿರುತ್ತೇನೆ. ಈ ಸಂಗತಿ ತಿಳಿದ ತತ್ ಕ್ಷಣ ನಾನು ನಿಮ್ಮನ್ನು ಅಭಿನಂದಿಸಿರುತ್ತೇನೆ.

ಈ ಸ್ಥಾನಕ್ಕೆ ತಾವು ಸಮರ್ಥರು ಎನ್ನುವುದಕ್ಕೆ ಯಾರದೇ ದೃಢೀಕರಣದ ಶರಾ ಅಗತ್ಯವಿಲ್ಲ ಸ್ವತಹ ನಿಮ್ಮ ಸಾಧನೆಯೇ ಅದಕ್ಕೆ ಪುಷ್ಟಿದಾಯಕವಾಗಿದೆ. ನಿಮ್ಮ ಗರಡಿಯಲ್ಲಿ ಪಳಗಿದ ಸಾವಿರ ಸಾವಿರ ವಿದ್ಯಾರ್ಥಿಳು ಸಾಕ್ಷಿದಾರರಿರುತ್ತಾರೆ. ಉಪನ್ಯಾಸಕರಾಗಿ ವಿದ್ಯಾರ್ಥಿಗಳ ಹೃದಯ ಮತ್ತು ಮೆದುಳಲ್ಲಿ ಪಾಠ ಇಳೀದು, ಸದಾ ಉಳಿಯುವ ಹಾಗೆ ತಮ್ಮ ಪಾಂಡಿತ್ಯಪೂರ್ಣ, ನಿರರರ್ಗಳವಾಗಿ ಪಾಠಮಾಡುವ ವರಸೆ ಎಂದೆಂದಿಗೂ ನಮ್ಮ ಹೃದಯದಲ್ಲಿ ಅಚ್ಚಳಿಯದೇ ಇದೆ.

ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ನಿಮ್ಮ ಸಾಧನೆಯ ಹೆಚ್ಚುಗಾರಿಕೆ ಇದೆ. ನೀವೇ ಹುಟ್ಟುಹಾಕಿದ ಹಲವಾರು ಸಂಘಟನೆಗಳ ಮುಖಾಂತರ ನೀವು ತೋರಿದ ಸಾಮಜಿಕ ಕಾಳಜಿ ವಿಶಿಷ್ಟವಾಗಿದೆ. ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುವ ಮಾತುಗಾರಿಕೆ ಬೆರಗುಗೊಳಿಸುವಂತಿರುತ್ತದೆ. ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಸ್ಥಾನದಲ್ಲಿ ನಿಮ್ಮನ್ನು ಕಾಣುವ ಬಯಕೆ ನನ್ನದು. ಅಲ್ಲಿಯೂ ನೀವು ಸಮರ್ಥರು.

ವೇದಿಕೆಯ ಎದುರು ಕುಳಿತು ನಿಮ್ಮ ಮಾತು ಕೇಳುವುದೇ ಒಂದು ಸಂಭ್ರಮ. ಆದರೆ ನಾಳೆ ನಡೆಯುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಾನು ಭಾಗವಹಿಸುವದಿಲ್ಲ. ಇದು ನನಗೆ ತೀವ್ರವಾದ ನೋವಿನ ಸಂಗತಿ. ಮಹಾ ಸಮ್ಮೇಳನದಲ್ಲಿ ಒಬ್ಬನ ಅನುಪಸ್ಥಿತಿಯಿಂದ ಯಾವ ಕೊರತೆಯೂ ಆಗದು ಎನ್ನುವ ಅರಿವು ನನಗಿದೆ.

ನಿಮ್ಮ ಸರ್ವಾಧ್ಯಕ್ಷತೆಯಲ್ಲಿ ಜರುಗುವ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗುತ್ತದೆ. ಆದಾಗ್ಯೂ ಸಂಭ್ರಮಯುಕ್ತವಾಗಿ ಯಶಸ್ವೀಯಾಗಲೆನ್ನುವುದು ನನ್ನ ಬಯಕೆ. ನಾನು ಇಲ್ಲಿಂದಲೇ ಸಂಭ್ರಮಿಸಿ, ಹೆಮ್ಮೆ ಪಡುವೆ.

ಶುಭಾಶಯಗಳೊಂದಿಗೆ ವಂದನೆಗಳು.

ನಿಮ್ಮ ಪ್ರೀತಿಯ ಕೃಷ್ಣ ನಾಯಕ ಹಿಚ್ಕಡ


ಕವಿ ಕೃಷ್ಣ ನಾಯಕ ಹಿಚಕಡ ನನ್ನ ತಲೆಮಾರಿನ ಭರವಸೆಯ ಕವಿ,ಅಪಾರವಾದ ಜೀವನ ಪ್ರೀತಿಯ ಮನುಷ್ಯ. ಬದುಕು ಮತ್ತು ಬರಹಗಳ ನಡುವೆ ಅನ್ಯೋನ್ಯ ಸಂಬಂಧ ಕಾಯ್ದುಕೊಂಡ ಪ್ರಜ್ಞಾವಂತ. ಕಷ್ಣನ ವಲ್ಲಭೆ ರೋಹಿಣಿ ನನ್ನ ವಿದ್ಯಾರ್ಥಿನಿ‌. ಅವರ ಮಗ ಆಕಾಶ ಕಾದಂಬರಿಕಾರ. ಸಾಹಿತ್ಯ ಸಮ್ಮೇಳನದಲ್ಲಿ ಬರಲು ಸಾಧ್ಯವಾಗುತ್ತಿಲ್ಲ ಎಂದು ನನ್ನ ಶಿಷ್ಯ ಕೃಷ್ಣ ಬರೆದ ಪತ್ರ ಇದೀಗ ನೋಡಿದೆ. ಅದು ಎಂದಿಗು‌‌ ಔಟಡೇಟೆಡ್ ಆಗದೆ ಎವರ ಡೇಟೆಡ್ ಆಗಿರುತ್ತದೆ ಎಂದು ನಂಬಿ‌ ಆಲೋಚನೆಯಲ್ಲಿ‌ ಪ್ರಕಟಿಸುತ್ತಿದ್ದೇನೆ.

ಡಾ.ಶ್ರೀಪಾದ ಶೆಟ್ಟಿ. ಸಂಆದಕ ಆಲೋಚನೆ.ಕಾಂ



25 views0 comments
bottom of page