ಶ್ರೀಪಾದ ಶೆಟ್ಟರು ಕಟ್ಟಿದ ತೇರು
ಹೊರಟಿದೆ ರಸಜಾತ್ರೆ ಗೈಯುತ್ತ ಮುಂದೆ
ತೇರನೆಳೆಯುವವು ಆನೆಗಳು
ಗುಡಿ ಮೇಲೆ ಗುಬ್ಬಿ
ಕಾಸರಗೋಡಿಂದ ಗುಜರಾತ ತನಕ
ನೆಲಜಲವನೊಂದಾಗಿ
ಬೆಸೆದಿಹುದು ತಬ್ಬಿ
ಕುಲದೇವಿ ಶ್ವೇತಾಂಬೆ
ರಥದೊಳಗೆ ಕುಳಿತಿಹಳು
ಕನ್ನಡದ ಕುಸುರಿ
ಸುರಿಯುತ್ತ ಸುರಗಿ
ಬಹುದೊಡ್ಡ ಮಾಲೆ ಕನ್ನಡದ ದೇವಿಗೆ
ಶ್ರೀಪಾದ ಜಾತ ಶ್ರೀ ಪಾರಿಜಾತ
ಅಡಿಯಲ್ಲಿ ನಮನ
ಮುಡಿಯೆಡೆಗೆ ಗಮನ
ಕೈ ಮುಗಿವ ನಮ್ರತೆ
ಬಳಿಬರುವ ವಿಸ್ಮಿತೆ.....
ನೈವೇದ್ಯ ಗೆಣಸೆಲೆ
ಲಾಭವನು ಗಣಿಸಲೇ
ಹುತ್ತಗಟ್ಟಿದ ಪೀಠ
ಅನುಭವದ ಮಂಟಪ
ಏರಿಹಳು ಬಿಳಿದೇವಿ
ಕನ್ನಡದ ಸರಸತಿ
ಸಿರಿಪಾದದೊಡತಿ
ನಿಂತು ನೋಡಲು ಚೆಂದ
ತೇರ, ಹಿಡಿದು ಸಾಗಲು ಹಿಗ್ಗು
ಹಗಲಿಲ್ಲ, ಇರುಳಿಲ್ಲ
ಗಳಿಗೆ ಮುಹೂರ್ತ ಗಳಿಲ್ಲ
ನಿಲ್ಲದೇ ಸಾಗಿಹುದು ಕಬ್ಬಿಗರ ತೇರು
ಶ್ರೀಪಾದ ಶೆಟ್ಟರು ಕಟ್ಟಿದ ತೇರು
ಡಾ. ಜಿ. ಎಸ್. ಹೆಗಡೆ,
ಹಡಿನಬಾಳ.