top of page

ಕಾವ್ಯ ಕನ್ನಿಕೆ

ಇಂದು‌ವದನೆಯೆ ಚಂದವತಿಯೆ

ನೀನೆ ಕಾವ್ಯೋನ್ಮಾದಿನಿ

ಅಂದದಾ ಪದಬಂಧಕೆ

ಸುಳುಹು ನಿನ್ನಂದದ ಖನಿ


ಹಂಸ ನಡಿಗೆಯ ಪದತಲದಲಿ

ಮಣ್ಣು ತಾ ಮರುಗುಡುತಿದೆ

ಬಿಟ್ಟು ಹೋಗದಿರೆನುತ

ಹೆಜ್ಜೆಯ ಸಾವಕಾಶಿಸಿ ಸೋತಿದೆ


ನೀಳ ಮೂಗಿಗೆ ನತ್ತು ನಾಚಿದೆ

ತನ್ನ ಸ್ಥಾನದ ಮೇಲ್ಮೆಗೆ

ಚೆಂಗುಳಿಯ ಕಪೋಲ ಕರೆದಿದೆ

ಮನ ಸೆಳೆದು ತನ್ನಲ್ಲಿಗೆ


ಕೆಂಗುಲಾಬಿಯ ಮೊಗವದು

ಮಗಮಗಿಸುತಿದೆ ನಗು ಹೊಮ್ಮಿಸಿ

ದಂತ ಪಂಕ್ತಿಯ ಹೊಳಹಿನಲ್ಲಿ

ಮಿಕ್ಕೆಲ್ಲ ಚಂದವ ಮೀರಿಸಿ


ಸಂಪಿಗೆಯ ಮೊಗಕೆ ಹಣೆಬೊಟ್ಟ ಚಿಟ್ಟೆ

ಮುಖಪುಷ್ಪ ಮುದ್ದಿಸಿ ನಗುತಿದೆ

ಮುಗ್ಧತೆಯ ಕಣ್ಣೋಟವದು

ಕನಿಕರಿಸಿ ಬರಸೆಳೆವಂತಿದೆ


ಬಳುಕೊ ಮೈಯದು ನವಿರು ಲತೆ

ಕೈ ಬೆರಳು ಚಿಗುರಿನ ಕುಡಿಗಳು

ಕುಂಭ ಮಾಟ ನಿತಂಬಗಳು

ಎದೆಯುಬ್ಬು ಹದವರಿತಂತಿದೆ


ಪಾರಿಜಾತದ ಪುಷ್ಪದಂತೆಯೆ

ಸುಕೋಮಲ ನಿನ್ನ ಮೈಸಿರಿ

ಗಂಧ ವರ್ಣದ ನಿನ್ನಂಗವೆ

ಸುಗಂಧ ತಾ ಸೂಸುತ್ತಿದೆ


ನಿನ್ನಂದ ಬಣ್ಣಿಸಿ ತೃಪ್ತನಾಗದೆ

ಕವಿ ಮನವು ತಾ ಕೊರಗಿದೆ

ದೈವ ಸೃಷ್ಟಿಯ ಅದ್ಭುತವು ನೀ-

-ನೆಂದು ಸಾಂತ್ವನಗೊಂಡಿದೆ



# ಸಂತೋಷಕುಮಾರ ಅತ್ತಿವೇರಿ

5 views0 comments
bottom of page