top of page

ಈ ಬಂಧ ಅನುಬಂಧ


ತಣ್ಣನೆಯ ಗಾಳಿ ತಂಪನ್ನು ಸೂಸಿ

ತನ್ನಲರನ್ನು ಅರಳಿಸಲು

ಬುವಿ ತನ್ನ ಮಣ್ಣ ತಂಪೆರದು ಹೂಹಾಸಲು

ಒರಗಿದಾ ಜೀವಕ್ಕೆ ಸುಖ ನಿದ್ದೆ

ಭರವಸೆಯ ನೀಡಿ ಕನಸುಗಳ ಬೆಸೆದು

ಸಾಗುವ ಜೀವಗಳದ್ದೊಂದು ಮೋಡಿ

ನೆಲದನಿಯ ಕೇಳುತಲಿ ಜೋಗುಳವ ಹಾಡುತಲಿ

ಇಳೆಯೊಳಗೆ ನೆಲೆಯಾಗಲು ಜೀವಿತವು

ದಣಿವು ಹೀರಿ ಕಸುವು ನೀಡಿ ಪೊರೆಯುತಲಿ

ಈ ಬುವಿಯ ಕರುಣೆಯೇ ಸಾಗರವು

ಎಲ್ಲೆ ಎಲ್ಲೆಗಳಲ್ಲಿ ಗೆಲುವು ಸನ್ನಿಹಿತವು

ಮಣ್ಣ ಕಣಕಣವೂ ಹೊನ್ನ ಸಂತಸವು

ಹಗಲಿರುಳು ನೆಲದೊಳಗೆ ನೂರಾರು ಸಗ್ಗವು

ಮತ್ತೆ ಮೌನದಲಿ ತಂಗಾಳಿ ಬೀಸಲು

ದುಂಬಿ ಜೀರುಂಡೆಗಳು ಝೇಂಕಾರ ಮಾಡಿರಲು

ಎಳೆ ಎಳೆಯ ಗಳಿಗೆಯೂ ಗೌರವದ ಭಾವವು

ಜಗದ ಜಾತಕದಿ ಜೀವಿತವು ಸೊಬಗಿನದು

ಧರೆಯೊಳಗೆ ಉಸಿರ ಪೊರೆಯುವುದು ಈ ನೆಲವು

ಎಂದೆಂದಿಗೂ ಬತ್ತದ ಮಡಿಲಿದು ಈ ಜಗದಿ

ಅನ್ನವನು ನೀಡುತಲಿ ಕನಸುಗಳ ಸುರಿಸುತಲಿ.....



ನಾಗರಾಜ ಬಿ.ನಾಯ್ಕ ಹುಬ್ಬಣಗೇರಿ ಬಾಡ ಕುಮಟಾ




ನಾಗರಾಜ ನಾಯ್ಕ ಬಾಡ ಅವರು ಅಂಕೋಲಾ ತಾಲೂಕಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ ರಚನೆ,ಚಿತ್ರ ಬಿಡಿಸುವುದು,ಪೋಟೊಗ್ರಫಿ,ಪರಿಸರ ರಕ್ಷಣೆ ಅವರ ಹವ್ಯಾಸಗಳು. "ಈ ಬಂಧ ಅನುಬಂಧ " ಎಂಬ ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ ಆಲೋಚನೆ.ಕಾಂ


110 views0 comments
bottom of page