top of page

ಇಂದು ಜನ್ಮದಿನದ ಸಂಸ್ಮರಣೆ

ಕರ್ನಾಟಕ ವಿಶ್ವವಿದ್ಯಾಲಯದ ರೂವಾರಿ

ಡಾ. ಡಿ. ಸಿ. ಪಾವಟೆ

********

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರವೆಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ದಾನಪ್ಪ ಚಿಂತಪ್ಪ ಪಾವಟೆಯವರು ಏರಿದ ಎತ್ತರ , ಸಾಧಿಸಿದ ಸಾಧನೆ ಬಹಳ ದೊಡ್ಡದು. ೧೮೯೯ ರ ಅಗಸ್ಟ್ ೨ ರಂದು ಹುಟ್ಟಿದ ಪಾವಟೆಯವರು ಧಾರವಾಡ ಕರ್ನಾಟಕ ಕಾಲೇಜಿನಿಂದ ಗಣಿತದಲ್ಲಿ ಪ್ರಥಮ ದರ್ಜೆಯ ಆನರ್ಸ್ ಪದವಿ ಪಡೆದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಸೆಕ್ಸ್ ಕಾಲೇಜು ಸೇರಿ ಅಲ್ಲಿಯೂ ಪ್ರಥಮ ಶ್ರೇಣಿಯಲ್ಲಿ ಪಾಸಾಗಿ, ೧೯೨೭ ರಲ್ಲಿ ರ್ಯಾಂಗ್ಲರ್ ಆಗಿ ಆಯ್ಕೆಗೊಂಡು ಸಂಶೋಧನಾ ವಿದ್ಯಾರ್ಥಿಯಾಗಿ ಸಂಶೋಧನೆ ಪೂರ್ತಿಗೊಳಿಸಿ ಭಾರತಕ್ಕೆ ಮರಳಿ, ಬನಾರಸ ಹಿಂದೂ ವಿ.ವಿ. ದ ಗಣಿತ ಶಾಸ್ತ್ರ ಪ್ರಾಧ್ಯಾಪಕರಾಗಿ ಎರಡು ವರ್ಷ ಸೇವೆ ಸಲ್ಲಿಸಿ ನಂತರ ಮುಂಬಯಿ ವಿದ್ಯಾ ಇಲಾಖೆ ಸೇರಿಉನ್ನತ ಸ್ಥಾನಗಳಲ್ಲಿ ಕೆಲಸ ಮಾಡಿ ೧೯೪೭ ರಲ್ಲಿ ಆ ಇಲಾಖೆಯ ನಿರ್ದೇಶಕರಾದರು.

ನಿವೃತ್ತಿಯ ನಂತರ ಪಾವಟೆಯವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸುಮಾರು ೧೪ ವರ್ಷ ಆ ಸ್ಥಾನದಲ್ಲಿದ್ದು ಅದನ್ನು ಅದ್ಭುತ ರೀತಿಯಲ್ಲಿ ಬೆಳೆಸಿ ಮಾದರಿ ವಿಶ್ವವಿದ್ಯಾಲಯವಾಗಿಸಿದರು. ಅವರ ಕಾಲಾವಧಿಯಲ್ಲಿ ಕವಿವಿ ಪರಿಪೂರ್ಣ ಮತ್ತು ಸಶಕ್ತ ಸ್ವರೂಪದ ಬೆಳವಣಿಗೆ ಕಂಡಿತು.

ಡಾ. ಡಿ. ಸಿ. ಪಾವಟೆ ಅವರ ಸರ್ವತೋಮುಖ ಸೇವೆಯನ್ನು ಪರಿಗಣಿಸಿ ಭಾರತ ಸರಕಾರ ಅವರಿಗೆ ೧೯೬೬ ರಲ್ಲಿ ಪದ್ಮ ಭೂಷಣ ಗೌರವ ನೀಡಿತು. ೧೯೬೭ ರಲ್ಲಿ ಅವರನ್ನು ಪಂಜಾಬ ರಾಜ್ಯಪಾಲರನ್ನಾಗಿ ನೇಮಿಸಲಾಯಿತು.‌ ಈ ಮಧ್ಯೆ ಅವರು ಅಧಿಕೃತ ಭಾಷಾ ಸಮಿತಿಯ ಸದಸ್ಯರಾಗಿ, ಜಿನೇವಾದ ಅಂತಾರಾಷ್ಟ್ರೀಯ ಸಮ್ಮೇಳನದಲ್ಕಿ ಭಾರತದ ನಿಯೋಗದ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಪಾವಟೆಯವರು ರಚಿಸಿದ. " ಎಲಿಮೆಂಟ್ಸ್ ಆಫ ಕ್ಯಾಲ್ಕುಕ್ಯಲಸ್ " ಮಹತ್ವದ ಗ್ರಂಥವಾಗಿದೆ. ತಮ್ಮ ಶೈಕ್ಷಣಿಕ ಜೀವನಕ್ಕೆ ಸಂಬಂಧಿಸಿಯೂ ಅವರು ಎರಡು ಗ್ರಂಥ ಬರೆದಿದ್ದಾರೆ.

ಕರ್ನಾಟಕದ ಶೈಕ್ಷಣಿಕ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ಸಲ್ಲಿಸಿದ ಪಾವಟೆಯವರು ೧೯೭೯ ರ ಜನೆವರಿ ೧೭ ರಂದು ನಿಧನ ಹೊಂದಿದರು.


- ಎಲ್. ಎಸ್. ಶಾಸ್ತ್ರಿ



10 views0 comments
bottom of page