top of page

ಹರಿವು



ಆಸ್ಪತ್ರೆಯ ಮಂಚದ ಕೋಲಿಗೆ

ತ್ರಿವಿಕ್ರಮನ ಬೇತಾಳದಂತೆ

ತಲೆಕೆಳಗಾಗಿ ನೇತು ಬಿದ್ದ

ಬಾಟಲಿಯಿಂದ

ಜಿನುಗುವ ರಕ್ತದ ಹನಿಗೆ

ಜೀವ ಉಳಿಸುವ ಮಹತ್ತರ ಹೊಣೆಯಿತ್ತು

ಅದಕ್ಕಾಗಿ ಆಚೀಚೆ ನೋಡದೆ

ಅದು ಓಡುತ್ತಿತ್ತು

ಶಿಸ್ತಿನ ಸಿಪಾಯಿಗಳಂತೆ

ಒಂದರ ಹಿಂದೆ ಒಂದೊಂದೇ ಹನಿ

ದೇಹದೊಳಗೆ ಸೇರುತ್ತಿತ್ತು

ಖಂಡಿತ ಜೀವ ಉಳಿಸುತ್ತೇನೆಂಬ

ಭರವಸೆಯ ಹೊತ್ತು

ತಾನಾವ ಜಾತಿಯ ಲೇಬಲ್

ಅಂಟಿಸಿ ಕೊಂಡವರಿಂದ ಬಂದೆ

ಮತ್ತಾವ ಜಾತಿಯ ಪಟ್ಟಿಯಲ್ಲಿದ್ದವರ

ದೇಹ ಸೇರುತ್ತೇನೆಂಬ ಅರಿವು

ಕಿಂಚಿತ್ತೂ ಇರಲಿಲ್ಲವದಕೆ

ಪ್ರಾಣ ಉಳಿಸುವುದಷ್ಟೇ ಗೊತ್ತಿತ್ತು

ಯಾರೋ ಪುಣ್ಯಾತ್ಮರ ದೇಹದಿಂದಿಳಿದು

ಇನ್ನಾರೋ ಕಂಡು ಕೇಳರಿಯದವರ

ದೇಹ ಹೊಕ್ಕಲು ಒಲ್ಲೆಯೆನಲಿಲ್ಲವದು

ಒಂದಿನಿತೂ ತಕರಾರೆತ್ತಲಿಲ್ಲ

ಯಾವ ಶರತ್ತೂ ಹಾಕಲಿಲ್ಲ

ಒಂದೇ ಗುರಿಗೆ ಧಾವಿಸುತ್ತಿತ್ತು

ಗೋರಿಯೊ ಪೆಟ್ಟಿಗೆಯೊ ಸುಡುಗಾಡೊ

ಒಟ್ಟಿನಲ್ಲಿ ಯಾವುದೋ ರೀತಿಯಲಿ

ಮಣ್ಣ ಬೆರೆಯುವ

ಒಂದು ಜೀವ ಉಳಿಸುವ

ಪವಿತ್ರ ಕಾರ್ಯವಿತ್ತು

ಅದಕ್ಕಾಗಿ ಅದು ನಿಲ್ಲದೇ

ನಿರಂತರ ಹರಿಯುತ್ತಲೇ ಇತ್ತು


ವೆಂಕಟೇಶ ಬೈಲೂರು





ನಮ್ಮ ನಡುವಿನ ಜೀವನ ಪ್ರೀತಿ ಮತ್ತು ಭರವಸೆಯ ಕವಿ ವೆಂಕಟೇಶ ಬೈಲೂರು.ಭಾರತೀಯ ಸ್ಟೇಟ್ ಬ್ಯಾಂಕಿನ ಉದ್ಯೋಗಿ. ಪ್ರವೃತ್ತಿಯಲ್ಲಿ ಕವಿ. ಈಗಾಗಲೇ "ಹೊಸ ಬೆಳಕಿನ ಬೀಜಗಳು" "ಮಿಂಚು ಹನಿಗಳು" ಎನ್ನುವ ಹನಿಗವನ ಸಂಕಲನ ಮತ್ತು "ತಿಂಗಳ ಮಾಮ" (ಮಕ್ಕಳ ಕವನ ಸಂಕಲನ) ಎನ್ನುವ ಮೂರು ಸಂಕಲನಗಳನ್ನು ಪ್ರಕಟಿಸಿ ಕನ್ನಡ ತಾಯಿಯ ಉಡಿ ತುಂಬಿದ್ದಾರೆ. "ಮೂಕಸಾಕ್ಷಿ" ಎನ್ನುವ ಕವನ ಸಂಕಲನ ಪ್ರಕಟಣೆಯ ಹಂತದಲ್ಲಿದೆ. ಇವರು ಹನಿಗವನ' ಚುಟುಕು' ಮುಕ್ತಕ' ಕವಿತೆ' ಮಕ್ಕಳ ಕಥೆ' ಮಕ್ಕಳ ಕವಿತೆ ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿದ್ದಾರೆ. ನಾಡಿನ ಹಲವಾರು ಪತ್ರಿಕೆಗಳಲ್ಲಿ ಇವರ ಕವಿತೆಗಳು ಮತ್ತು ಬರಹಗಳು ಪ್ರಕಟವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ವರ್ಷದ ಬರಹಗಾರ ಪ್ರಶಸ್ತಿ ಸೇರಿದಂತೆ ೨೦೨೨ನೆ ಸಾಲಿನ ಭಟ್ಕಳ ತಾಲೂಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ. ಇವರ " ಹರಿವು" ಕವಿತೆ ಈಗ ನಿಮ್ಮ ಓದು ಮತ್ತು ಪ್ರತಿಕ್ರಿಯೆಗಾಗಿ ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ‌.ಕಾಂ


185 views2 comments
bottom of page