top of page

ಅಮ್ಮ !

ನೀ ಇರದಾ ಬಾಳು ಒಡೆದು ಹೋದ ಕೊಳಲು

ನುಡಿಸುವೊಡೆ ನಾದ ವೆಂತು ಹೊರ ಹೊಮ್ಮೀತು ಹೇಳು ?


ನೀ ಇರದಾ ಬಾಳು ಗರಿಕಳೆದುಕೊಂಡ ನವಿಲು

ನರ್ತಿಸುವೊಡೆ ಸೊಗಸು ಕಣ್ಗೆ ಹೇಗೆ ಹೊರ ಸೂಸೀತು ಹೇಳು ?


ನೀ ಇರದಾ ಬಾಳು ಮೇಘ ಇರದಾ ಮುಗಿಲು

ಭುವಿಯ ಬೇಗೆ ಕಳೆದು ಹಸಿರ ಚಿಗುರು ಹೇಗೆ ಅಂಕುರಿಸೀತು ಹೇಳು ?


ನೀ ಇರದಾ ಬಾಳು ಹೂಳ್ತುಂಬಿದ ಹೊಳೆಯು

ನಗೆಯ ಹಾಯಿದೋಣಿ ಮುಂದೆಮುಂದೆ ಸಾಗಿ ಹೇಗೆ ದಡಸೇರೀತು ಹೇಳು ?


ಹಸಿದೊಡಲ ತುಂಬಿ ನಗುವ ಅಕ್ಷಯಪಾತ್ರೆ ನೀನು.ಸುಡುವ ಬೆಂಕಿ ಭುಗಿಲೆದ್ದರಲ್ಲಿ ನೀರ ಸೆಲೆಯು ನೀನು.

ನೆರಳ ಬಯಸಿ ಬಂದವರಿಗೆ

ಮಹಾ ವೃಕ್ಷ ನೀನು.

ಬೀಳುಗಾಳಿಯೇ ಸುಯ್ದರದನು ತಡೆವ ಮೇರುಗಿರಿಯು ನೀನು.


ಎಷ್ಟಿದ್ದರೂ ಏನೀದ್ದರೂ ನೀ ಇರದ ಬಾಳು ಬರಿದು ಶೂನ್ಯ ಕೇಳು

ಅಮ್ಮಾ ಎಂಬ ಎರಡಕ್ಷರದ ಬೆಲೆ ಅಗಾಧ ಅರಿತೆ ಈಗ ನಾನು

ಮಹಾ ಮಹಿಮಾನ್ವಿತೆ ನೀನು

ಮತ್ತೆ ಮರಳಿ ಬರುವೆ ಎಂತು ಹೇಳು ? ಅಮ್ಮಾ !

***********


ಚಿದಾನಂದ ಭಂಡಾರಿ ಕಾಗಾಲ

6 views0 comments
bottom of page