top of page

ಸುಡು ಒಡಲು

ಬಿರಿದರೂ ಈ ಭುವಿಗೆ

ಹಸಿರು, ಹಸಿವ, ಕಾವು

ಬೀಜ ಹೀರಿ ಚಿಗಿತು

ಚಿಮ್ಮಲಾರದ ನೋವು...

 ಜೀವಜಲ ಬತ್ತಿ ಬಲ ಕಳೆಯೆ

ಇಳೆಗೆ ಬಿರುದು ಬಂಜೆ,ಪಾಳು

ಹಡೆದದ್ದೊಂದಿಷ್ಟು ಹಾದರಕ್ಕಿಳಿಯೆ

ಯೆನ್ನೊಡಲು ಕೆನ್ನೆತ್ತರದ ಕಡಲು

ಬೆಳೆಗೆನ್ನ ಬಗೆದು ಉಳುಮೆ

ನೋವಿಲ್ಲ ಬರೀ ಹಸಿರ ನೆನಪು

ಮರ ನೆರಳ ಧರೆಗುರುಳಿಸಿ

ಕನ್ನಡಿಯ ಚೂರು ಆ ಒನಪು

ಉರಿ ಬಿಸಿಲು ಸುಡುಗಾಳಿ

ಬಿರುಕು ಶರೀರ ಮಂದ ಶ್ವಾಸ

ಬೇಡಿ ತರಲೆಲ್ಲಿ ಮಡಿಲ ಮರಳಿ

ಹರಿದ ತುಟಿಯಿಂದೆಲ್ಲಿ ಮಂದಹಾಸ


-ಗೋಪಾಲಕೃಷ್ಣ ಹೆಗಡೆ.ಕಲ್ಭಭಾಗ.


ಹೊನ್ನಾವರ ತಾಲೂಕಿನ ಕಲಭಾಗದ ಗೋವಿಂದ ಹೆಗ್ಡೆಯವರ ಮನೆಯಲ್ಲಿ ನಾದದ ನದಿಯೊಂದು ಉಗಮವಾಗಿ ಅದು ದೇಶ ವಿದೇಶಗಳಲ್ಲಿ ಹರಿದು ಅಲ್ಲಿಯ ಮನೆ ಮನಗಳನ್ನು ತಂಪಾಗಿಸಿದೆ. ಗೋಪಾಲಕೃಷ್ಣ ಹೆಗಡೆ ಕಲಭಾಗ. ಸಂಗೀತದ ಸಹಾಯಕ ಪ್ರಾಧ್ಯಾಪಕರು. ಎಸ್.ಡಿ.ಎಮ್. ಕಾಲೇಜು ಹೊನ್ನಾವರ. ದೇಶ - ವಿದೇಶದಲ್ಲಿ ತಬಲಾ ಕಾರ್ಯಕ್ರಮ. ಯಕ್ಷಗಾನ ಮತ್ತು ಸಂಗೀತದ ಸಮ್ಮಿಲನವಾದ ಲಯ-ಲಾಸ್ಯ, ಗಾನ-ಲಯ-ಲಾಸ್ಯ ಹಾಗೂ ಪಾಶ್ಚಿಮಾತ್ಯ ವಾದ್ಯಗಳಾದ ಜಂಬೆ, ಡರ್ಬೂಕಾದೊಟ್ಟಿಗೆ ತಬಲಾ ಹಾಗೂ ನಮ್ಮ ಜನಪದದ ಅದ್ಭುತ ವಾದ್ಯವಾದ ಪಾಂಗ್ ಜೊತೆ ಸೇರಿಸಿದ ಲಯ- ವಿನೋದ ಕಾರ್ಯಕ್ರಮದ ನಿರ್ದೇಶಕರೂ, ಕಲಾವಿದರೂ ಆದ ಶ್ರೀ ಗೋಪಾಲಕೃಷ್ಣ ಹೆಗಡೆಯವರ ಮನೆತನವೇ ಸಂಗೀತ ಮಯ. ಪೂಜ್ಯ ಶ್ರೀ ಎಸ್. ಎಮ್. ಭಟ್ ಕಟ್ಟಿಗೆ ಹಾಗೂ ಪೂಜ್ಯ ಪಂ. ಶೇಷಗಿರಿ ಹಾನಗಲ್ ಅವರಲ್ಲಿ ತಬಲಾ ಅಭ್ಯಾಸ. ಆಕಾಶವಾಣಿ- ದೂರದರ್ಶನ ಕಲಾವಿದರು. ಹವ್ಯಾಸಿ ಬರಹಗಾರರು.ಸೃಜನಶೀಲತೆಯೆ ಮೈವೆತ್ತಂತಿರುವ ಗೋಪು ಪ್ರಯೋಗ ಶೀಲ ಕಲಾವಿದ,ಸಹೃದಯಿ ಮತ್ತು ಸ್ನೇಹ ಜೀವಿ ಅವರ ಕವನ ನಿಮ್ಮ ಓದಿಗಾಗಿ. ಸಂಪಾದಕ.

46 views0 comments

©Alochane.com 

bottom of page