top of page

ವಿರಹದ ಹೆಜ್ಜೆಗಳು

ನಿನ್ನ ಕನವರಿಕೆಯ ಕಂಬಳಿ ಮಡಚಿಟ್ಟು

ನನ್ನ ಪಾಡಿಗೆ ಬಯಲ ಸೇರಬೇಕು

ಕಾಡ ಹಾದಿಯಲ್ಲಿ ನನ್ನ ಯಾವ

ಹೂವು ನಗಿಸಬಾರದು

ಯಾವ ದನಿ ಕೇಳದಷ್ಟು ಆಳವಾದ

ನೆಲೆಯಲ್ಲಿ ಮಗ್ನನಾಗಬೇಕು

ಕಾಲ ಸವೆದರೂ ತಿರುಗಿಬಾರದ

ಒಂಟಿ ಊರು ಸಿಗಬೇಕು

ಇದಕ್ಕೆ ಕಾರಣ ಕೇಳಬೇಡ

ನೀನೆ ಖುಷಿಗೆ ನೋವಿನ ಕೋಟೆ ಕಟ್ಟಿದವನು

ಹೃದಯಕ್ಕೆ ಭಾರ ಹೊರಿಸಿದವನು

ಇಷ್ಟೆಲ್ಲಾ ಮುಗಿದ ವರುಷಗಳ ನಂತರ

ಈ ಸನ್ನೆಯ ಧಾವಂತ

ಕಳ್ಳ ನೋಟದ ಮಿಂಚು

ಇವೆಲ್ಲ ಬೇಡದ ಹುಚ್ಚು ನಿನದಲ್ಲವೇ?



ನನ್ನ ತಡೆಯಲು ಸೆಳೆಯಲು

ಸಮರ್ಥನೆಯ ಜಾದು ಹೂಡಿ

ಆ ಯಂತ್ರದ ಮೇಲೆ ನಡೆಸುವ

ಅಮಲು ಪ್ರೇಮ ಬೇಡವೇ ಬೇಡ

ಈಗೀಗ ವೇಷ ಕಳಚಿದ ಮುಖಗಳೆ

ನನಗೆ ಸಿಗುತ್ತಿಲ್ಲ !

ನಾನು ನನ್ನ ನೋಡುವ ದರ್ಪಣ ಹಿಡಿದು

ಸಾಗುತ್ತಿರುವೆನು...ಸಾಗುತ್ತಿರುವೆನು


ಸೀರೆಗೆ ಬಣ್ಣವಿಲ್ಲ,ಮುಡಿಗೆಹೂವಿಲ್ಲ

ಇದರ ಗುದ್ದಾಟದ ನಡುವೆ

ಸಿಡಿಯುವ ಸಾಸಿವೆಯಂತೆ

ನನಗೂ ನಿನಗೂ ಬಾರದ ನೆಂಟರ ತರ್ಕ

ಸಂಜೆಗೆ ಅದೇ ಕಾಯುವ ಕಂಗಳ ಕದನ

ರಾತ್ರಿಯ ಗಂಭೀರ ಮಾತು ತಣ್ಣನೆಯ ನಿದ್ದೆ

ಇವೆಲ್ಲಕ್ಕೂ ಬೀಗ ಹಾಕಿ ನಡೆದಿರುವೆ

ಮತ್ತೆ ಅದೇ ವಸಂತದ ಕಳೆ ಚೆಲ್ಲುವನಂತೆ

ಬೆನ್ನ ಹಿಡಿಯಬೇಡ ...ಕಾದು ಕರಗಬೇಡ

-ಎಂ.ಜಿ.ತಿಲೋತ್ತಮೆ, ಭಟ್ಕಳ

 
 
 

Recent Posts

See All
ದೀಪಾವಸಾನ

ಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---

 
 
 
ವ್ಯವಸ್ಥೆ

ಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---

 
 
 

Comments


©Alochane.com 

bottom of page