top of page

ಬಾ ಬಾರೇ ಶಾರ್ವರಿ

ಬಾ ಬಾರೇ ಶಾರ್ವರಿ/

ಹೆಚ್ಚು ಮಾಡು ಇಳುವರಿ/


ಹೋದಳಪ್ಪ ವಿಕಾರಿ/

ಕೆಡಿಸಿ ಹಾಕಿ ಬಜಾರಿ/

ವಿಷವನೆಲ್ಲ ಕಾರಿ/

ಜಗವೆಲ್ಲ ಉರಿಯುರಿ/


ಕಳೆಯಿತಪ್ಪ ಮಾರಿ/

ಬಿಟ್ಟು ಬಿಟ್ಟಳು ಫೇರಿ/

ಹೆಸರಿನಂತೆ ವಿಕಾರಿ/

ಕಾಡಿ ಕುಟ್ಟಿ ತರಾವರಿ/


ಮಾಡಿಟ್ಟಿದ್ದಳು ಗೋರಿ/

ಆಗಿ ಹೋದೆವು ಭಿಕಾರಿ/

ಸೋಂಕು ರೀ ಸೋಂಕು ರೀ/

ಅಡಗಿ ಕೂತು ಬದುಕಿರಿ/


ಹೆಸರಿಗೊಂದು ಕುಸುರಿ/

ಹಾದಿ ಬೀದಿ ಸವಾರಿ/

ಹೋದಳಪ್ಪ ಮಾರಿ/

ಗರ್ಧೃದೃಷ್ಟಿ ಬೀರಿ/


ಈಗ ಬಂದಳು ಶಾರ್ವರಿ/

ಬೆಳಕ ಪುಂಜ ಬೀರಿ/

ಸ್ವಲ್ಪ ದಿನ ತಣ್ಣಗಿರಿ/

ಊರು ಬಿಡಲಿ ವಿಕಾರಿ/


ಬಾ ಬಾರೇ ಶಾರ್ವರಿ/

ಹೊಸವರ್ಷದ ಉರ್ವರಿ/

ಬಾರಿಸಿರೋ ನಗಾರಿ/

ಢಮ್ ಢಮ್ ಭೇರಿ/


-ಡಾ. ವಸಂತಕುಮಾರ ಪೆರ್ಲ



ವಸಂತ ಕುಮಾರ ಪೆರ್ಲ ಅವರು ತಮ್ಮ ಬರಹಗಳಲ್ಲಿ ತಾಜಾತನವನ್ನು ಮತ್ತು ಕೌಮಾರ್ಯವನ್ನು ಕಾದುಕೊಂಡು ಬಂದಿರುವ ಜೀವನ ಪ್ರೀತಿಯ ಬರಹಗಾರ.ಕವಿ, ಸಾಹಿತಿ, ವಿಮರ್ಶಕ, ಮಾಧ್ಯಮತಜ್ಞ, ವಿದ್ವಾಂಸ, ವಾಗ್ಮಿ, ಸಂಘಟಕ, ಸಮಾಜ ಸೇವಕ – ಹೀಗೆ ಹಲವು ವಿಶೇಷಣಗಳ ಸಹೃದಯಿ ವ್ಯಕ್ತಿ ಡಾ. ವಸಂತಕುಮಾರ ಪೆರ್ಲ ಅವರು ಕಳೆದ ಮೂರು ದಶಕಗಳಿಂದ ಆಕಾಶವಾಣಿಯ ಮೂಲಕ ನಾಡು ನುಡಿಗೆ ಸಲ್ಲಿಸಿದ ಸೇವೆ ಬಹಳ ದೊಡ್ಡದು. ಸಾಹಿತ್ಯದೊಂದಿಗೆ ಪತ್ರಿಕೋದ್ಯಮ, ರೇಡಿಯೋ, ಟಿ.ವಿ., ರಂಗಭೂಮಿ, ಸಿನೆಮಾ ಮುಂತಾದ ಕ್ಷೇತ್ರಗಳಲ್ಲಿ ಅವರ ಕೊಡುಗೆ ಗಣನೀಯ.


ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಸಂಪಾದನೆ, ಪ್ರಬಂಧ, ವ್ಯಕ್ತಿಚಿತ್ರ, ಚಾರಣ ಸಾಹಿತ್ಯ, ಅಂಕಣ ಬರಹ ಮೊದಲಾದ ಪ್ರಕಾರಗಳಲ್ಲಿ 45ಕ್ಕಿಂತ ಹೆಚ್ಚು ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಹದಿನೈದಕ್ಕಿಂತ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಲಭಿಸಿವೆ. ಇಂಗ್ಲಿಷ್, ಹಿಂದಿ, ಪಂಜಾಬಿ, ತಮಿಳು, ತೆಲುಗು, ಮಲಯಾಳಂ, ಕೊಂಕಣಿ, ತುಳು ಭಾಷೆಗಳಿಗೆ ಅವರ ಕವನಗಳು ಅನುವಾದ ಆಗಿವೆ. ಹದಿನೈದಕ್ಕಿಂತ ಹೆಚ್ಚು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.ಸರಕಾರದ ಹಲವು ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಉತ್ತಮ ಚಿಂತಕರೆಂದೂ ಹೆಸರು ಗಳಿಸಿದ್ದಾರೆ. ತುಳು ಮತ್ತು ಇಂಗ್ಲಿಷ್ ಭಾಷೆಯಲ್ಲೂ ಸಾಹಿತ್ಯ ರಚಿಸುತ್ತಿದ್ದಾರೆ. ಅನುವಾದಗಳನ್ನೂ ಮಾಡಿದ್ದಾರೆ. ಸಾಹಿತ್ಯ, ಸಂಗೀತ, ನೃತ್ಯ ಮುಂತಾದ ಕ್ಷೇತ್ರಗಳಲ್ಲಿ ಡಾ. ಪೆರ್ಲ ಅವರ ಇಡೀ ಕುಟುಂಬವೇ ತೊಡಗಿಸಿಕೊಂಡಿದೆ.

71 views0 comments

©Alochane.com 

bottom of page