top of page

ಚುಟುಕು ಅಂಗಳ -೬

ರವೀಂದ್ರರ ೧೬೦ ನೆಯ ಜನ್ಮದಿನದ ನೆನಪಿನಲ್ಲಿ

*************

ತಮ್ಮ ಗೀತಾಂಜಲಿಗೆ ನೋಬೆಲ್ ಪ್ರಶಸ್ತಿ ಪಡೆದ ರವೀಂದ್ರನಾಥ ಟಾಗೊರ್ ಅವರ ಕೆಲವು ಹನಿಗವನಗಳನ್ನು ನಮ್ಮ ಚೆಂಬೆಳಕಿನ ಕವಿ ಚೆನ್ನವೀರ ಕಣವಿಯವರು ಕನ್ನಡಕ್ಕೆ ತಂದಿದ್ದಾರೆ. ಟಾಗೋರರ ,೧೬೦ ನೆಯ ಜನ್ಮ ದಿನದ ನಿಮಿತ್ತ ಅವರ ನೆನಪಿಗಾಗಿ ಅವರ " ಸ್ಪ್ರೇ ಬರ್ಡ್ಸ್" ದಿಂದ ಆಯ್ದ ಕೆಲ ಹನಿಗಳು.

*

ಹಕ್ಕಿ ಅಂದುಕೊಳ್ಳುತ್ತದೆ

" ನಾನು ಮೋಡವಾಗಬೇಕಿತ್ತು"

ಮೋಡಕ್ಕೆ ಅನಿಸುತ್ತದೆ

" ನಾನೊಂದು ಹಕ್ಕಿಯಾಗಬೇಕಿತ್ತು"

*

ಪ್ರೀತಿಯಲ್ಲಿ ಕಂಡುಕೋ ನಿನ್ನನ್ನು

ಸೌಂದರ್ಯವೆ,

ಕನ್ನಡಿಯ ಹೊಗಳಿಕೆಯಲ್ಲಲ್ಲ.

*

ಹೂವಿನಲ್ಲಿ

ನೆಲದ ಕಂಬನಿಗಳು

ತಮ್ಮ

ನಗೆಯನ್ನರಳಿಸುತ್ತವೆ.

*

"ಸಾಗರವೆ,

ಯಾವುದು ನಿನ್ನ ಭಾಷೆ?"

" ಚಿರಂತನ ಪ್ರಶ್ನೆ".

" ಓ ಆಗಸವೆ,

ಯಾವುದು ನಿನ್ನ ಭಾಷೆ?"

" ಚಿರಂತನ ಮೌನ".

*

ಬೇರುಗಳು

ಭೂಮಿಯಾಳದ ಟೊಂಗೆಗಳು

ಟೊಂಗೆಗಳು

ಗಾಳಿಯಲ್ಲಿನ ಬೇರುಗಳು.

*

ಮುಳುಗುತ್ತಿರುವ ಸೂರ್ಯ ಕೇಳಿದ-

" ಯಾರಿದ್ದಾರೆ ನನ್ನ ಕರ್ತವ್ಯ

ನೆರವೇರಿಸಲು?"

ನಮ್ರವಾಗಿ ನುಡಿಯಿತು

ಮೂಲೆಯ ಹಣತೆಯೊಂದು-

" ನನ್ನೊಡೆಯಾ,

ನನ್ನ ಕೈಲಾದಷ್ಟು

ನಾನು ಬೆಳಗಬಲ್ಲೆ"

ಸಂ.: ಎಲ್ಲೆಸ್ಸೆಸ್




5 views0 comments

©Alochane.com 

bottom of page