top of page

ಸು. ರಂ. ಎಕ್ಕುಂಡಿ

ಸುಬ್ಬಣ್ಣ ರಂಗನಾಥ ಎಕ್ಕುಂಡಿ ಕನ್ನಡದ ಮಹಾನ್ ಕವಿಗಳಲ್ಲಿ ಒಬ್ಬರು. ‘ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಅನುಭವವನ್ನು ಬಣ್ಣಿಸಲು ಸಾಧ್ಯ’ ಎಂಬುದು ಎಕ್ಕುಂಡಿಯವರ ನಿಲುವು. ಎಕ್ಕುಂಡಿಯವರು ತಾವು ಶಿಕ್ಷಕರಾಗುವವರೆಗೆ ನಡೆದು ಬಂದ ಕೆಂಡದ ಮೇಲಿನ ನಡಿಗೆಯೇ ಇವರ ಕಾವ್ಯವನ್ನು ನಿರ್ದೇಶಿಸಿದೆ.


ಸು. ರಂ. ಎಕ್ಕುಂಡಿ ರಾಣೆಬೆನ್ನೂರಿನಲ್ಲಿ 1923ರ ಜನವರಿ 20ರಂದು ಜನಿಸಿದರು. ಮನೆ ಸಾಗಿಸಲು ಪುಟ್ಟ ಎಕ್ಕುಂಡಿ ಬದುಕಿನ ಭಾರವನ್ನು ಹೊರಬೇಕಾಯಿತು. ಈ ಭಾರವಾದ ಬದುಕಿನ ಮಧ್ಯೆಯೂ ಎಕ್ಕುಂಡಿ ಓದಿನತ್ತ ಆಕರ್ಷಿತರಾದರು. ಸವಣೂರಿನಲ್ಲಿ ಶ್ರೀ ಸತ್ಯಭೋಧ ಸೇವಾಸಂಘ ನಡೆಸುತ್ತಿದ್ದ ವಾಚನಾಲಯದ ಪುಸ್ತಕವನ್ನು ಸದಸ್ಯರ ಮನೆಗೆ ಮುಟ್ಟಿಸುವ ಕೆಲಸ ಹೊತ್ತರು. ಪ್ರತಿಫಲವಾಗಿ ವಾಚನಾಲಯದ ಪುಸ್ತಕಗಳನ್ನು ಪುಕ್ಕಟೆ ಓದುವ ಅವಕಾಶ ಸಿಕ್ಕಿತು. ಎಕ್ಕುಂಡಿ ಸಾಹಿತ್ಯಲೋಕಕ್ಕೆ ಕಾಲಿರಿಸಿದ್ದು ಹೀಗೆ.


‘ಐದನೆಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಗಾಳಿ ಬೆಳಕು ಯಾವುದೂ ಸುಳಿಯದಿದ್ದ ಗುಹೆಯಂಥ ಮನೆಯಲ್ಲಿ ಊಟ, ಉಡುಗೆ, ಬಟ್ಟೆಬರೆ ಎಲ್ಲವೂ ಅಷ್ಟಕ್ಕಷ್ಟೇ ಇದ್ದವು. ಹಬ್ಬದ ದಿನಗಳಿಗೂ ಉಳಿದ ದಿನಗಳಿಗೂ ವೆತ್ಯಾಸವಿರದಿದ್ದ, ಶಾಲೆಯ ಫೀ ಕೊಡಲು ಅಸಾಧ್ಯವಾಗಿದ್ದ, ಯಾವ ವರ್ಷವೂ ಕಣ್ಣೀರು ಹಾಕದೆ ಪರೀಕ್ಷೆಗೆ ಕೂಡುವ ಅವಕಾಶ ಸಿಗದಿದ್ದ’ ರೀತಿಯಲ್ಲಿ ಬೆಳೆದರು ಎಕ್ಕುಂಡಿ.


ಹೈಸ್ಕೂಲಿನಲ್ಲಿ ಸಾಹಿತ್ಯದ ಗೀಳಿಗೆ ತಕ್ಕ ವಾತಾವರಣ ದೊರಕಿತು. ‘ಉನ್ನತಿ’ ಕೈಬರಹ ಪತ್ರಿಕೆ ಸಂಪಾದಿಸಿದ್ದೇ ಅಲ್ಲದೆ ಸಾಹಿತ್ಯಕ ಹರಟೆಗೆ ಜೊತೆಗಾರರು ಸಿಕ್ಕರು. ಪಾಠ ಮಾಡುತ್ತಿದ್ದ ಮಾಸ್ತರುಗಳು ಬಿಎಂಶ್ರೀ, ಟೆನಿಸನ್, ವರ್ಡ್ಸ್ ವರ್ತರನ್ನೂ ಪರಿಚಯಿಸಿದರು. ಎಕ್ಕುಂಡಿ ತಮ್ಮ ಹದಿನೈದನೇ ವಯಸ್ಸಿನಲ್ಲಿ ತಮ್ಮ ಶಾಲಾ ದಿನಗಳಲ್ಲಿಯೇ ಬರಹ ಆರಂಭಿಸಿದರು. ಜಗದೀಶಚಂದ್ರ ಬೋಸರ ಸಾವು ಎಕ್ಕುಂಡಿಯವರಲ್ಲಿ ಕವಿತೆಯಾಗಿ ಅರಳಿತ್ತು. ‘ಒಬ್ಬ ವಿಜ್ಞಾನಿಯ ಸಾವು ಒಬ್ಬ ಕವಿಯ ಹುಟ್ಟಿಗೆ ಕಾರಣವಾದದ್ದು ವಿಚಿತ್ರ ಸಂಗತಿ’ ಎನ್ನುತ್ತಿದ್ದರು ಎಕ್ಕುಂಡಿ. ‘ನಾಡಹಬ್ಬ’ ಎಕ್ಕುಂಡಿಯವರೊಳಗಿದ್ದ ಕವಿಯನ್ನು ಹೊರಗೆ ತರಲು ಮತ್ತಷ್ಟು ನೆರವಾಯಿತು. ನಾಡಹಬ್ಬಕ್ಕಾಗಿ ಹುಬ್ಬಳ್ಳಿಗೆ ಬಂದ ವಿ.ಕೃ. ಗೋಕಾಕ, ಬೇಂದ್ರೆ, ಬೆಟಗೇರಿಕೃಷ್ಣಶರ್ಮ, ಶಂ. ಬಾ. ಜೋಶಿ, ಶ್ರೀರಂಗರು ಸಾಹಿತ್ಯದ ಆಸಕ್ತಿ ಬೆಳಯಲು ಕಾರಣರಾದರು.


ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಪೇಜಾವರ ಸದಾಶಿವರಾಯರು ನಿಧನರಾದರು. ಅವರ ‘ವರುಣನಿಗೆ ಆಹ್ವಾನ’ದಿಂದ ಪ್ರಭಾವಿತಗೊಂಡಿದ್ದ ಎಕ್ಕುಂಡಿ, ಗಂಗಾಧರ ಚಿತ್ತಾಲ, ವರದರಾಜ ಹುಯಿಲಗೋಳ, ರಾಯ ಧಾರವಾಡಕರ, ವಿ.ಜಿ. ಭಟ್ ಇವರೊಂದಿಗೆ ‘ವರುಣ ಕುಂಜ’ ಬರಹಗಾರರ ಬಳಗವನ್ನು ಆರಂಭಿಸಿದರು. ಕಾಲೇಜಿನ ಈ ಬಳಗ ಪ್ರತಿವಾರ ಕಾವ್ಯ, ಕಥೆ, ಪ್ರಬಂಧ, ವಿಮರ್ಶೆ ಬರೆದು ಚರ್ಚೆ ನಡೆಸುತ್ತಿತ್ತು. ವಿ.ಕೃ. ಗೋಕಾಕ್, ರಂ.ಶ್ರೀ. ಮುಗಳಿಯವರ ಮಾರ್ಗದರ್ಶನ ಈ ಕುಂಜಕ್ಕೆ ಲಭಿಸಿ ಎಕ್ಕುಂಡಿಯವರ ‘ಮಾತು ಮಥಿಸಿ’ ಕವನ ಸಂಗ್ರಹಕ್ಕೆ ದಾರಿಮಾಡಿಕೊಟ್ಟಿತು. ವಿಲಿಂಗ್ಡನ್ ನಲ್ಲಿ ಓದುವಾಗಲೇ ಎಕ್ಕುಂಡಿಯವರ ಮೊದಲ ಕವನ ಸಂಕಲನ ‘ಸಂತಾನ’ವನ್ನು ರಂ.ಶ್ರೀ. ಮುಗಳಿ ಪ್ರಕಟಿಸಿದರು.


ಎಕ್ಕುಂಡಿಯವರ ನಂತರದ ಪಯಣ ಬಂಕಿಕೊಡ್ಲಕ್ಕೆ. ಅಲ್ಲಿಯೇ ಶಿಕ್ಷಕರಾದರು. ಬಂಕಿಕೊಡ್ಲ ಎಕ್ಕುಂಡಿಯವರ ಎದೆಯೊಳಕ್ಕಿಳಿಯಿತು. ಸಮುದ್ರ ತೀರದ ಈ ಊರಿನಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಇದ್ದ ಎಕ್ಕುಂಡಿಯವರ ಕವನಗಳಲ್ಲಿ ಅಲ್ಲಿನ ನಿಸರ್ಗ ಹೆಣೆದುಕೊಂಡಿದೆ. ಹಾದಿಯ ಮಧ್ಯದಲ್ಲಿ ಕೇಳಿ ಬರುವ ಕೋಗಿಲೆಯ ಧ್ವನಿ, ಗದ್ದೆಗಳ ಮಧ್ಯದಿಂದ ಧುತ್ತೆಂದು ಹಾರುವ ಬೆಳ್ಳಕ್ಕಿಗಳು, ಭೋರ್ಗರೆವ ಉಪ್ಪುಕಡಲು, ಚಾಮರ ಬೀಸಿ ಹಾಡುವ ತೆಂಗಿನ ಮರಗಳ ಸಾಲು ಸಾಲು, ಕೋಪಿಸಿ ಮೈಮೇಲೆ ದಿನಗಟ್ಟಲೇ ಸುರಿದು ಹಾವಳಿ ಎಬ್ಬಿಸುವಷ್ಟು ಮಳೆರಾಯ ಇವೆಲ್ಲಾ ಎಕ್ಕುಂಡಿಯವರ ಕವನಗಳಲ್ಲಿ ಕುಸುರಿಗೆಲಸ ನಡೆಸಿವೆ. ಆದರೆ ನಿಸರ್ಗದಲ್ಲಿ ತೊಯ್ದ ಎಕ್ಕುಂಡಿಯವರಿಗೆ ಅಷ್ಟೇ ವರ್ಷ ಆ ಕಡಲತಡಿಯ ತೆಂಗಿನ ಗರಿಕೆಯ ಗುಡಿಸಲುಗಳಿಂದ ನಿಟ್ಟುಸಿರುಗಳು ಸಹಾ ಕೇಳಿಸಿವೆ. ಕಡಲ ತೀರದಲ್ಲಿ ಬೆಂಕಿ ಹಚ್ಚಿ ಗುಮಟೆ ನುಡಿಸುತ್ತಾ ಹಾಡು ಹೇಳುತ್ತಾ ಇದ್ದವರ ಹಿಂದೆ ಎಷ್ಟು ನಿಟ್ಟುಸಿರು ಇದೆಯೆಂಬುದು ಎಕ್ಕುಂಡಿಯವರಿಗೆ ಗೊತ್ತಿರುವುದರಿಂದಲೇ ನಿಸರ್ಗವನ್ನು ಹಿಂದೆ ತಳ್ಳಿ ಅವರ ಕಾವ್ಯದಲ್ಲಿ ಜನಸಾಮಾನ್ಯರು ಇಣುಕುತ್ತಾರೆ.


‘ಎಕ್ಕುಂಡಿ ಅವರ ಕಾವ್ಯದ ಕೇಂದ್ರ ಮನುಷ್ಯನೇ ಆಗಿರುವುದಕ್ಕೂ, ಅವರ ಪ್ರಧಾನ ಕಾವ್ಯಪ್ರಕಾರ ಕಥನಕವನವೇ ಆಗಿರುವುದಕ್ಕೂ ಕಾರಣಗಳು ಸ್ಪಷ್ಟವಾಗಿಯೇ ಇವೆ. ‘ಬೆಳ್ಳಕ್ಕಿಗಳು’ ಸಂಕಲನದ ಕೆಲವು ರಚನೆಗಳು ಕೊಂಚ ಭಿನ್ನವಾದರೂ ಒಟ್ಟಾರೆ ಎಕ್ಕುಂಡಿ ಕಾವ್ಯಪ್ರಪಂಚ ಕಥನಕವನಗಳಿಂದಲೇ ಸಮೃದ್ಧವಾಗಿವೆ. ‘ಕೊರಗು’ ಎಂಬ ಕವನದಲ್ಲಿ ಏನಿಲ್ಲ ಎಂದು ಹೇಳುವಾಗ, ‘ಬುತ್ತಿ’ ಕವನದಲ್ಲಿ ಏನಾಗಬೇಕು ಎಂದು ಒತ್ತಿ ಹೇಳುವಾಗ, ‘ಬೆಳ್ಳಕ್ಕಿಗಳು’ ಕವನದಲ್ಲಿ ಭರವಸೆಯ ಹಾಡನ್ನು ಹಾಡುವಾಗ, ‘ಶರಣು’ ಕವನದಲ್ಲಿ ತನ್ಮಯತೆಯಿಂದ ಪ್ರಾರ್ಥಿಸುವಾಗ ಕೂಡ ಮನುಷ್ಯಾವಸ್ಥೆಯ ನೆಲೆಗಳಿಂದ ಎಕ್ಕುಂಡಿ ಕವನಗಳು ಬಿಡುಗಡೆ ಹೊಂದಿವೆ ಅನ್ನಿಸುವುದಿಲ್ಲ. ಪ್ರಕೃತಿಯನ್ನು ಕುರಿತು ಹಾಡುವಾಗಲೂ ಕವಿ, ಮನುಷ್ಯ ಸಮಾಜವು ಪ್ರಕೃತಿಯಿಂದ ಪಡೆಯಬಹುದಾದ ಜೀವನೋತ್ಸಾಹದ ಕಡೆಗೆ ಒಂದು ಕಣ್ಣಿಟ್ಟಿರುವುದು ಕಾಣುತ್ತದೆ’ (-ಟಿ. ಪಿ. ಅಶೋಕ)


ಪುತಿನ ಅವರು ಬಣ್ಣಿಸಿದಂತೆ ಎಕ್ಕುಂಡಿ ‘ಸಹಜ ಕವಿ’ಯಾದ ಕಾರಣದಿಂದಲೇ ಇವರ ಕಾವ್ಯದಲ್ಲಿ ಜನಸಾಮಾನ್ಯರು ಮೂಡಿ ಬಂದರು. ‘ನಂ,4, ಅಂತರ್ಸನ್ ಬೀದಿಯಲ್ಲಿ’, ಮನೆಯ ತೊಟ್ಟಿಲು, ಹಾಸಿಗೆ, ದುಪ್ಪಟ್ಟಿ, ಲಾಲಿಯ ಹಾಡುಗಳು, ಹರಾಜನ್ನು ನೋಡುತ್ತಾ ನಿಂತ ಕಾರ್ಲ್ ಮಾರ್ಕ್ಸ್, ಬಿಕ್ಕುತ್ತಿರುವ ಹೆಂಡತಿ ಹೆಲೆನ್, ಬಂಡವಾಳ ಬರೆಯುವುದರಲ್ಲಿ ನಿರತನಾಗಿರುವ ಶ್ರಮಜೀವಿ, ಬಂಧುವಿನ ಮನೆಗೆ ಬೆಳಕಾದ ಎಂಗೆಲ್ಸ್, ಹೆರಿಗೆ ಆಸ್ಪತ್ರೆಯ ಪೌಡರ್, ಪಿಯರ್ಸ್ ಪರಿಮಳದ ಹೊದಿಕೆಯಿಂದ ದೂರವಾಗಿ ಎರಡು ಲಾರಿಗಳ ಕೆಳಗೆ ಕಟ್ಟಿರುವ ಸೀರೆ ತುಂಡನ್ನು ಅಪ್ಪಿ ಮಲಗಿರುವ ಚಿನ್ನಮ್ಮನ ಕಂದ, ಎಸೆದ ಬ್ರೆಡ್ಡಿನ ತುಂಡು ಆಯಲು ತೊಟ್ಟಿಯೊಳಗೆ ಇಳಿಯುವ ದುಡಿವ ಕಸುವಿರುವ ಹಸಿದ ಕೈಗಳು, ಉಳ್ಳವರ ಎದೆಯಿಂದ ಬಂದಂಥ ಬೆಣಚು ಕಲ್ಲುಗಳ ಮೇಲೆ ಕಾಲಿಟ್ಟು ಗಾಯಗೊಂಡ ಕೂಲಿಕಾರರು, ಕೆಲಸವೇ ಶಿವಧ್ಯಾನವಾದ ದಾಸಿಮಯ್ಯ, ಹಾಲೆಂದೇ ಹಿಟ್ಟು ನೀರು ಕುಡಿದ ಅಶ್ವತ್ಥಾಮ, ಶ್ರೀಧರನಾಮದ ಖಜಾನೆ ತೆರೆಯುವ ಬೀಗದಕೈ ಹಿಡಿದು ಹಣದ ಖಜಾನೆಯಿಂದ ಹೊರಬಿದ್ದ ಪುರಂದರದಾಸ, ವಿಷದ ಬಟ್ಟಲಿಗೆ ಬಲಿಯಾದ ಸಾಕ್ರೆಟಿಸ್, ಎರಡು ದಂತಗಳ ಬೆಸೆದು ದೂರವಿದ್ದವರನ್ನು ಹತ್ತಿರ ತಂದ ಮಧ್ವಮುನಿ, ಏಸುಕ್ರಿಸ್ತ, ಜಬಾಲ, ರಂತಿದೇವ, ಪ್ರವಾದಿ, ಕಳ್ಳ ಡಕಾಯಿತ, ಅಂತೆಯೇ ಬಕುಲದ ಹೂಗಳನ್ನು ನೋಡಿ ಒಂದೆರೆಕ್ಷಣ ನೋವೆಲ್ಲವನ್ನೂ ಮರೆತ ಜೋಡಿ – ಎಕ್ಕುಂಡಿಯವರ ಕವನಗಳ ಕ್ಯಾನ್ವಾಸ್ನಲ್ಲಿ ಜನರೊಂದಿಗೆ ಸಂಪಾದಿಸುವವರು ಅದೆಷ್ಟು ಜನ!


ಎಕ್ಕುಂಡಿಯವರೇ ಬಣ್ಣಿಸುವ ಹಾಗೆ – ಅವರ ಕಾವ್ಯ – ‘ಶಬರಿ, ಸುಧಾಮ, ಗಜೇಂದ್ರ, ಕುಬ್ಜೆ ಮತ್ತು ಪುರಂದರದಾಸರ ಭಕ್ತಿ ಮತ್ತು ಪ್ರೇಮಗಳನ್ನು ಕುರಿತು ಬಣ್ಣಿಸುತ್ತದೆ. ಏಸು, ಪ್ರವಾದಿ ಹಾಗೂ ದೇವರ ದಾಸೀಮಯ್ಯರಂಥ ಆತ್ಮದ ಒಕ್ಕಲಿಗರನ್ನು ಬಣ್ಣಿಸುತ್ತದೆ’.


‘ಇಷ್ಟಕ್ಕೇ ನಿಲ್ಲದೆ ಹಸಿದವರನ್ನೂ ಬಡತನವನ್ನೂ ಕುರಿತು ಹೇಳಿದ ಕಾರ್ಲ್ ಮಾರ್ಕ್ಸ್ ಮತ್ತು ಶ್ರಮಜೀವಿಗಳ ಮನ ಕರಗಿಸುವ ಕಥೆಗಳಲ್ಲಿ ಶೋಷಿತರ ಹಾಗೂ ನಿರ್ಗತಿಕರ ಪರವಾಗಿ ಅದು ಕ್ಷೋಭೆಗೊಂಡು ಧ್ವನಿಯೆತ್ತಿದೆ. ನನ್ನ ಕಾವ್ಯವು ಉಳುವ ಕೈಗಳನ್ನೂ, ಪ್ರಾರ್ಥಿಸುವ ಕೈಗಳನ್ನೂ ಕುರಿತು ಹಾಡುತ್ತದೆ ಎನ್ನುತ್ತಿದ್ದರು ಎಕ್ಕುಂಡಿ. ಮಾರ್ಕ್ಸ್ ಮತ್ತು ಮಧ್ವ ಬದುಕಿನಿಂದ ಆಯ್ದು ಕಟ್ಟಿದ ಕವಿತೆಗಳು ಎಕ್ಕುಂಡಿಯವರ ಕಾವ್ಯದ ಎರಡು ದಂಡೆಗಳಂತೆ ಹಾಗೂ ಅವರೆ ಕವಿತೆಯಲ್ಲಿ ಹೇಳುವಂತೆ-


ದೂರವಿದ್ದವರನ್ನು ಹತ್ತಿರಕ್ಕೆ ತರಬೇ

ಕು, ಹರಿವ ಹೊಳೆಗೂ ಉಂಟು ಎರಡು

ತೋಳು, ನೆಲವನ್ನಪ್ಪಿದ ಎರಡು ದಂಡೆ

ಗಳ ಬಾಂಧವ್ಯ ಬೆಸೆಯ ಬೇಕಲ್ಲವೇ?

ನಮ್ಮ ಬಾಳು-


ಎಂಬಂತೆ ಎಕ್ಕುಂಡಿಯವರ ಕಾವ್ಯ ಈ ಎರಡೂ ದಂಡೆಗಳನ್ನು ಬೆಸೆದಿದೆ. ಅವರು ಹೇಳುವ ಮಹತ್ವದ ಮಾತು “ಅನುಯಾಯಿಗಳನ್ನು ನೋಡಿ ನಾವು ಮತದ ಬಗ್ಗೆ ನಿರ್ಣಯ ನೀಡಬಾರದು. ಮತವನ್ನು ನೋಡಿ ಅನುಯಾಯಿಗಳನ್ನು ನಿರ್ಧರಿಸಬೇಕು. ಮನಸ್ಸನ್ನು ವಿಶಾಲಗೊಳಿಸುವ ಎಲ್ಲವನ್ನೂ ಸ್ವೀಕರಿಸಬೇಕು, ಸಂಕುಚಿತಗೊಳಿಸುವುದನ್ನು ಬಿಟ್ಟುಬಿಡಬೇಕು.”


ಎಕ್ಕುಂಡಿ ಹೇಳುವ ಕಥೆಗಳು ಕಾವ್ಯೋದ್ದೇಶಕ್ಕೆ ಬದ್ಧವಾಗುವಂತೆ ಕವಿಯ ದರ್ಶನಕ್ಕೂ ಅರ್ಥಪೂರ್ಣವಾಗಿ ದುಡಿಯುತ್ತದೆ. ಎಕ್ಕುಂಡಿ ಮೂಲತಃ ಕವಿ, ಕತೆಗಾರರಲ್ಲ. ಆದ್ದರಿಂದಲೇ ಇವು ಪದ್ಯರೂಪದಲ್ಲಿ ಹೇಳಿರುವ ಕತೆಗಳಲ್ಲ, ಕಥನಕವನಗಳು. ಇಂದೊಂದು ನಿರಂತರ ಕಥನ.


ಎಕ್ಕುಂಡಿ ಅವರ ಸಮಗ್ರ ಕಾವ್ಯವನ್ನು ಡಿ. ವಿ.ಪ್ರಹ್ಲಾದ್ ಸಂಚಯದ ಮೂಲಕ ಪ್ರೀತಿಯಿಂದ ಪ್ರಕಟಿಸಿದರು.


ಸು.ರಂ. ಎಕ್ಕುಂಡಿ ಅವರಿಗೆ 1970ರಲ್ಲಿ ಸೋವಿಯತ್ ಲ್ಯಾಂಡ್ ಪ್ರಶಸ್ತಿ, 1982 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1992ರಲ್ಲಿ ‘ಬಕುಳದ ಹೂಗಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿದ್ದವು. 1984ರಲ್ಲಿ ರೋಮ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಸು.ರಂ. ಎಕ್ಕುಂಡಿಯವರು 1995ರ ಆಗಸ್ಟ್ 20ರಂದು ನಿಧನರಾದರು.


ಈ ಅಪೂರ್ವ ಕವಿ ಚೇತನಕ್ಕೆ ನಮ್ಮ ನಮನ.


ಚಿತ್ರಕೃಪೆ: ಎ.ಎನ್. ಮುಕುಂದ Mukunda AN


(ಆಧಾರ: ಜಿ. ಎನ್. ಮೋಹನ್ ಅವರು ಬರೆದಿರುವ ಸು.ರಂ. ಎಕ್ಕುಂಡಿಯವರನ್ನು ಕುರಿತ ಬರಹವನ್ನು ಈ ಲೇಖನ ಆಧರಿಸಿದೆ)


(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallpa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)




68 views0 comments
bottom of page