ಈ ದಿನಗಳಲ್ಲಿ
ನಮ್ಮ ಈ ಇಳೆಯಲ್ಲಿ
ಎಲ್ಲಿ ನೋಡಿದರಲ್ಲಿ
ಕಿವಿಯಾಡಿಸಿದರಲ್ಲಿ
ಸ್ಪರ್ಧೆಗಳು ಬರಿ ಸ್ಪರ್ಧೆಗಳು !!
ಮುಗ್ಧ ಮಗುವಿನ ನಗುವಿನ ಸ್ಪರ್ಧೆ
ಮಕ್ಕಳ ಓದಿನ ನೆನಪಿನ ಸ್ಪರ್ಧೆ
ಎಳೆಯ ಕೊರಳಿನ ಇಂಪಿನ ಸ್ಪರ್ಧೆ
ಮೈ ಮುರಿಯುವ ನೃತ್ಯದ ಸ್ಪರ್ಧೆ !!
ಓಡುವ ಸ್ಪರ್ಧೆ , ಜಿಗಿಯುವ ಸ್ಪರ್ಧೆ ,
ನೀರಲಿ ಮೀನಾಗಿ ಈಜುವ ಸ್ಪರ್ಧೆ
ತಿನ್ನುವ ಸ್ಪರ್ಧೆ , ಕುಡಿಯುವ ಸ್ಪರ್ಧೆ
ಥಟ್ಟನೆ ಹೇಳುವುದಕ್ಕೂ ಸ್ಪರ್ಧೆ !!
ಜಗದಲಿ ಸುಂದರಿ ನಾನೆನ್ನುವ ಸ್ಪರ್ಧೆ
ಉಕ್ಕಿನ ದೇಹದ ಪುರುಷರ ಸ್ಪರ್ಧೆ
ದಂಪತಿ ಜೋಡಿಯ ಜ್ಞಾನದ ಸ್ಪರ್ಧೆ
ಲಕ್ಷ , ಕೋಟಿ ಬಹುಮಾನದ ಸ್ಪರ್ಧೆ !!
ಜಗದಲಿ ಸರಿಸಮ ದೇಹಗಲುಂಟೇ ?
ಹುಟ್ಟು, ರಕ್ತ , ನರ ಸರಿಸಮವುಂಟೇ ?
ಸಮ ಜನ ನಡುವೆ ಎಲ್ಲಿದೆ ಸ್ಪರ್ಧೆ ?
ಇದನರಿತರೆ ಮಾತ್ರ ಬದುಕ ನೀ ಗೆದ್ದೆ !!
ಕಿರಣ ಅಂಕ್ಲೇಕರ
ಮೂಲತಃ ಅಂಕೋಲೆಯವರಾದ ಕಿರಣ ಅಂಕ್ಲೇಕರ ಇವರು ಸದ್ಯ ಮಹಾರಾಷ್ಟ್ರದ ಪುಣೆಯಲ್ಲಿ ಸುಮಾರು ೧೬ ವರ್ಷಗಳಿಂದ ವಾಸಿಸುತ್ತಿದ್ದು, ಹೊರನಾಡ ಕನ್ನಡಿಗರಾಗಿ ಕನ್ನಡ ಭಾಷಾ ಪ್ರಪಂಚಕ್ಕೆ ತಮ್ಮದೇ ರೀತಿಯಲ್ಲಿ, ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ತಿಂಗಳಷ್ಟೇ ತಮ್ಮ ಪ್ರಥಮ ಕವನ ಸಂಕಲನ " ಬೆಳಕಿದೆ.. ಭಯ ಬೇಡ" ವನ್ನು ಲೋಕಾರ್ಪಣೆ ಮಾಡಿದ ಇವರನ್ನು ಕೇವಲ ಕವಿ ಎಂದು ಗುರುತಿಸುವುದು ತಪ್ಪಾದೀತು. ಸಾವಯವ ರಸಾಯನಶಾಸ್ತ್ರದಲ್ಲಿ ಪಿ. ಎಚ್. ಡಿ ಪದವಿ ಪಡೆದಿರುವ ಇವರು ಬಹುರಾಷ್ಟ್ರೀಯ ಔಷದ ಕಂಪನಿಯೊಂದರ ಡೈರೆಕ್ಟರ್ ಹುದ್ದೆಯಲ್ಲಿದ್ದು, ಭಾರತ ಮತ್ತು ಆಫ್ರಿಕಾ ಉಪಖಂಡಗಳ ಜವಾಬ್ದಾರಿ ಹೊತ್ತಿದ್ದಾರೆ. ಪುಣೆಯಲ್ಲಿ ಪರಿಸರ ಸಂರಕ್ಷಣೆಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು, ಉತ್ತಮ ಛಾಯಾಚಿತ್ರಕಾರರೂ, ಗಾಯಕರೂ , ಬರಹಗಾರರೂ ಹೌದು.
ಪತ್ನಿ ಕಾವ್ಯ ಮತ್ತು ಮಕ್ಕಳಾದ ಕವನಾ ಮತ್ತು ಕಾರುಣ್ಯರೂ ಸಾಹಿತ್ಯ ಮತ್ತು ಕಲೆ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿರುವುದೂ ಗಮನಾರ್ಹ .