top of page

ಚಿತೆಉರಿವುದುನಿಲ್ಲಲಿ

ನನಗಿಂತ ಸಣ್ಣವರು ನನ್ನ ಹಿಂದಿಕ್ಕಿ

ಕಾಲನ ಅರಮನೆಗೆ ಅಕಾಲದಲ್ಲಿ

ಹೋಗಿ ಸೇರುವುದನ್ನು ನೋಡಿ

ಸುಮ್ಮನಿರಲಾಗುತ್ತಿಲ್ಲ

ಏನ ಮಾಡಲಿ ಹೇಳಿ ?


ಈಗೀಗ ವಿಧಿಗೆ ಯಾವ ನಿ'ಯಮ'ವೂ ಇಲ್ಲ

ಅಂತಕನ ಮನೆಗೆ ಸೆಳೆದು ಒಯ್ಯಲು

ಕಾರಣವೇ ಬೇಕಾಗಿಲ್ಲ

ಮಕ್ಕಳು- ಯುವಕರು ಯಾರಾದರೂ ಸರಿ

ಕುಣಿಕೆಗೆ ಕೊರಳ ಒಡ್ಡಲೇ ಬೇಕು


"ಜಾತಸ್ಯ ಮರಣಂ ದ್ರುವಂ" ನಿಜವೇ ಆದರೂ

ಅದಕ್ಕೂ ಒಂದು ಕ್ರಮವಿಲ್ಲವೇ

ಸಾವಲ್ಲಿಯೂ ಅನುಕ್ರಮವಿಲ್ಲವೇ

ಮುಕ್ಕಣ್ಣ ನೀನೇಕೆ ಮುಚ್ಚಿರುವೆ ಕಣ್ಣ

ಲಯಕೆ ಯಾವುದೇ ಆಲಯದ ನಿಯಮವಿಲ್ಲವೇ?


ದೀರ್ಘಾಯುಷ್ಯ ಶಾಪ ಎಂಬುದು ಗೊತ್ತು

ಭೀಷ್ಮನ ನೋವ ಬಲ್ಲೆವು ನಾವು

ಬದುಕು ಎಂದರೆ ಸಾವಿಗೆ ಕುಷಿಯಿಂದ

ಎದುರಾಗುವುದೇ ಅಲ್ಲವೇ?

ಸಾಕಾದರೆ ಸಲ್ಲೇಖನವಿಲ್ಲವೇ !


"ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ"

ಇದೊಂದು ನಿಜವಾದರೆ ಸಾಕು

ಹಣೆಯಲ್ಲಿ ಬರೆದದ್ದು ಆಗಲೇ ಬೇಕು

ಹೆತ್ತವರ ಮುಂದೆ ಮಕ್ಕಳ ಚಿತೆ ಉರಿವುದು ನಿಲ್ಲಬೇಕು ದೇವ..ಅದೊಂದೇ ವರಕೊಡು ಸಾಕು



✍️ಪ್ರಶಾಂತ ಮೂಡಲಮನೆ

ವಂದೂರು




20 views0 comments
bottom of page