top of page

ಉಪ್ಪಿಟ್ಟು ಮತ್ತು ಅಧ್ಯಾತ್ಮ

ನಿನ್ನಿಷ್ಟದ ಶ್ಯಾವಿಗೆಯ

ಸಾಲ ತಂದು

ನನ್ನೊಲವಿನ ಒಗ್ಗರಣೆ

ಹಾಕಿ ಉಪ್ಪಿಟ್ಟು

ಮಾಡುವುದೆಂದರ ಅದೊಂದು‌

ಮಹಾ ತಪಸ್ಸು ಭಗವಂತಾ

ಹುರಿದ ಈರುಳ್ಳಿಯ ಘಮ

ಊದಿನಕಡ್ಡಿ ಕರ್ಪೂರಕ್ಕಿಂತ

ಇಂಚಿಂಚೇ ಗುಂಗೇರಿಸಬೆಕು

ತುಪ್ಪದ ದೀಪ ಹಚ್ಚದಿದ್ದರೂ ಕಡಾಯಿಯಂಚಲ್ಲಿ

ಎಣ್ಣೆಯಿಳಿವ ಸಂಭ್ರಮಕ್ಕೆ

ಮತ್ತೇರದ ದೇವರಾರು

ಶ್ಯಾವಿಗೆ ಉಪ್ಪಿಟ್ಟೆಂದರೆ

ಹೊಟ್ಟೆ ಬಾಕಿ ನಾನು

ನಿನಗೂ

ಅಷ್ಟಷ್ಟೇ ಬಟ್ಟಲು ತುಂಬಿ

ಸಂಜೆಯ ಹಾದಿಯೊಳಗೆ

ನೈವೇದ್ಯಕ್ಕಿಡುತ್ತಿದ್ದೇನೆ

ಒಣಮೆಣಸಿನಕಾಯಿಯ

ಘಾಟಿಗೆ ನಿನ್ನ

ಕಣ್ಣೊಳಗೆ ನೀರಿಳಿಯದಿದ್ದರೆ

ಸಾಕು ದೇವರೇ

ಎಣ್ಣೆಯೊಳಗಿತ್ತ

ಉದ್ದಿನ ಬೇಳೆಯ ರುಚಿಗೆ

ಕೇಳಿದ್ದಕ್ಕೆಲ್ಲ ತಥಾಸ್ತು

ಅನ್ನಬೇಕಿದೆ ನೀನು


ಸಂಧ್ಯಾ ವಿ. ನಾಯ್ಕ ಅಘನಾಶಿನಿ

1 view0 comments
bottom of page