top of page

ಅಣ್ಣಾ

ಅಣ್ಣಾ ಅನ್ನೋರು ಹಜಾರ ಮಂದಿ ಅದಾರ

ಆದರೆ ನಿನ್ನಾಂಗೆ ಅಣ್ಣಾ ಆಗೋದು

ಅಷ್ಟು ಸೋವಿ ಅಲ್ಲೊ ಮಾರಾಯ

ಯೋಧ ನಡೆದ ದಾರಿ ಅಷ್ಟು ಸಲೀಸು ಅಲ್ಲ

ಕಲ್ಲು ಮುಳ್ಳು ಕಗ್ಗಾಡು ಚಳಿ ಬಿಸಿಲು ಬೆಂಕಿ

ತುಟಿ ಕಚ್ಚಿ ಉಸಿರ ಬಿಗಿ ಹಿಡಿದು

ಮುನ್ನಡೆವ ಅಸಿಧಾರಾ ವೃತ

ದುರ್ಗಮ ದಾರಿಯನು ಹೆದ್ದಾರಿ ಮಾಡಿ

ಯುದ್ದ ಮಾಡಲು ಜನ ಬಲವ ಕರೆದೊಯ್ದೆ

ಮನೆ ಗೆದ್ದು ಮಾರು ಗೆಲ್ಲುವ ಛಲದಂಕ ಮಲ್ಲ

ರಾಳೆಗಾಣಸಿದ್ದಿ ಗ್ರಾಮಕ್ಕೆ ಜೀವ ಚೈತನ್ಯ ತುಂಬಿ

ಭಾರತದ ಪ್ರತಿ ಹಳ್ಳಿಗೂ ಮಂತ್ರ ದೀಕ್ಷೆ ನೀಡಿ

ಸಿದ್ಧಿಯಾಗಲು ಸತತ ಹೋರಾಟ ನಡೆಸಿದವ

ಆಗ ಪರದೇಶದವರೊಡನೆ ಯುದ್ದ

ಈಗ ದೇಶ ನುಂಗುವ ಭ್ರಷ್ಟಾಚಾರದ

ಮಹಾ ಮಾರಿಯೊಡನೆ ಕೂಟ ಯುದ್ದ

ಹೊಸ ಸೇನೆಯನೆ ಕಟ್ಟಿದೆ

ಹೊಸ ಹುರುಪನು ತುಂಬಿದೆ

ಆಳರಸರ ತಲೆಯ ಮೆಟ್ಟಿ ಜನ ಮನದಿ

ಆತ್ಮ ವಿಶ್ವಾಸವನು ತುಂಬಿದೆ

ಉಪವಾಸ ಕುಳಿತರೂ ಬತ್ತಲಿಲ್ಲ

ಸಾತ್ವಿಕ ಹೋರಾಟದ ಜೀವ ಜಲ

ಪ್ರಜಾ ಪ್ರಭುತ್ವದ ಹೆಸರಿನಲಿ

ಪ್ರಭುಗಳಾದವರಿಗೆ ನಿದ್ದೆ ಹತ್ತಲಿಲ್ಲ

ಸೇನೆ ಬೆಳೆಯುತ್ತ ಹೋಯ್ತು

ಶಾಲೆ ಕಾಲೇಜು ಮನೆಗಳಿಂದ

ದಂಡೆದ್ದು ಬಂದರು ಜನರು

ಸ್ವಂತ ಕೆಲಸವ ಮರೆತರು

ಜನಪಾಲ ಮಸೂದೆ ಬರಲಿ ಎಂದರು

ಕಳ್ಳ ಖದೀಮರಿಗೆ ನಡುಕ ಹುಟ್ಟಿಸಿದರು

ಅಣ್ಣಾ

ಸಂಭವಾಮಿಗೆ ಕಾಯುತ್ತಿದ್ದವರಿಗೆ

ನಿನ್ನ ಮುಖದ ಮಂದಹಾಸ ಕಂಗಳಲಿ

ಹೊರಹೊಮ್ಮಿದ ಆತ್ಮ ವಿಶ್ವಾಸದ

ತಿಂಗಳ ಬೆಳಕು ಜನಪಾಲ ಮಸೂದೆ

ಬಂದು ಬಡವ ಬಲ್ಲಿದನಾಗಲಿ

ಜನಹಿತದ ಶಕ್ತಿ ಅಕ್ಷಯವಾಗಲಿ.


‌‌ ಶ್ರೀಪಾದ ಶೆಟ್ಟಿ

16 views0 comments

Comments


bottom of page