ಇನ್ನೊಂದು ಹೆಜ್ಜೆಯನು ಎಲ್ಲಿಡಲಿ ಎನ್ನುತಲಿ
ಮೂಲೋಕ ವ್ಯಾಪಿಸಿದ ಸಾಕಲ್ಯಮೂರ್ತಿ
ಕನ್ನಡದ ಕೈಂಕರ್ಯ ಸತತ ನಡೆಸಿದ ಯೋಗಿ
ಜೀವಿಸಿದಿರಿಲ್ಲಿ ನೀವ್ ಶತಮಾನಪೂರ್ತಿ |
ವಿಧವಿಧದ ನುಡಿಗಳಿಗೆ ಅರ್ಥವನು ನಿರವಿಸಿದ
ಶಬ್ದಕೋಶದ ಶಿಲ್ಪಿ ನಿಮಗೆ ನುಡಿನಮನ
ಅಂಬೆಗಾಲಿಕ್ಕುವರ ಕೈಹಿಡಿದು ನಡೆಸುತ್ತ
ಹುರಿದುಂಬಿಸಿದ ನಿಮಗೆ ಸಾವಿರದ ನಮನ |
ಅಪ್ಪಯ್ಯನೊಡನಾಟ ನೆನೆಸಿಕೊಳ್ಳುತಲಂದು
ತೀರ್ಥರೂಪರ ತೆರದಿ ಹರಸಿದಿರಿ ನನ್ನ
ಅಪ್ರಬುದ್ಧಳ ಕರೆದು ನುಡಿಸೇಸೆಯನ್ನಿಟ್ಟ
ಗುರುಚರಣದಲ್ಲಿಡುವೆ ನನ್ನ ಶಿರವನ್ನ |
ಸರಸತಿಯ ವರಪುತ್ರ ನಿಮ್ಮಾತ್ಮಶ್ರೀ ಇಂದು
ಭವಬಂಧನವ ಕಳಚಿ ಸಾಯುಜ್ಯಗೊಳಲಿ
ನೀವು ಸಾಗಿದ ದಾರಿ ಮುಂದಿರುವ ಪೀಳಿಗೆಗೆ
ಎಡವದೆಯೆ ನಡೆಯಲಿಕೆ ದೀಪವಾಗಿರಲಿ ||
- ಇಂದಿರಾಜಾನಕಿ.
Comments