top of page

ಮಳೆ-ಮನಗಳ ಬೆಸುಗೆ

ಗುಡುಗುಡಿಸಿತು ಆರ್ಭಟಿಸಿತು

ನಭ ರಣರಂಗ ನಗಾರಿ

ಮೃಡನ ಡಮರುಗವೋ

ಕಾಲನ‌ ಕಂಠಾರವವೋ

ಕಿಡಿ ಸೂಸುವ ಕಾರ್ಮೋಡದಿ

ನೀರ್ಗಲ್ಲಿನ ತಣಿವು

ನಂಟಿನ ಕಹಿ ಮನಸುಗಳಡಿ

ಪ್ರೀತಿಯ ಸಿಂಚನವು


ಹನಿಯೊಡೆಯಿತು ಧೋ ಸುರಿಯಿತು

ತಣಿಸಿತು ಭೂರಮೆ ತನುವ

ಕಿರುಚಿತು ಕಂಬನಿಯಿಟ್ಟಿತು

ಬಂಧವು ಕ್ಷಮಿಸಿತು ಮನವ


ತಣಿದ ನೆಲವದು ಬೀಜಾಂಕುರಿಸಿ

ಹಸಿರ ಕಾಣಲು ಕಾದಿದೆ

ನೋಂತ ಮನವದು ಬಂಧ ಬೆಸೆಯಲು

ಹೊಸತು ಕನಸನು ಕಂಡಿದೆ


ದೃಷ್ಟಿ ಸೃಷ್ಟಿಯ ತುಲನೆಯಲ್ಲಿದೆ

ಸಾಮಗಾನದ ಲಹರಿಯು

ಕಲಿವ ಮನಸಿಗೆ ಪ್ರಕೃತಿ ಆಟವೆ

ತಿಳಿವ ಜೀವನ ಪಾಠವು


#ಸಂತೋಷಕುಮಾರ ಅತ್ತಿವೇರಿ


ಸಂತೋಷಕುಮಾರ ಪಾಟೀಲ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಸುಂದರ ಪಕ್ಷಿಧಾಮ, 'ಅತ್ತಿವೇರಿ' ಇವರ ಹುಟ್ಟೂರು. ಪ್ರಸ್ತುತ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರ ಕವನಗಳಲ್ಲಿ ಓದಿನ ಆಳ ಸ್ಪಷ್ಟವಾಗಿ ಗೋಚರಿಸುತ್ತದೆ. ವೈಚಾರಿಕತೆ ಹಾಗೂ ಭಾವನಾತ್ಮಕತೆಗಳೆರಡನ್ನೂ ಇವರ ಬರವಣಿಗೆಯಲ್ಲಿ ಕಾಣಬಹುದು. ಅವರ ಈ ಕವನ ತಮ್ಮ ಓದಿಗಾಗಿ..

-ಸಂಪಾದಕ






 
 
 

2 Comments


ಪ್ರಸ್ತುತ ಸ್ಥಿತಿಗೆ ಬಹಳ ಹತ್ತಿರದ ಕವನ !!! ಶುಭವಾಗಲಿ !!!

Like

suja gunaga
suja gunaga
Feb 23, 2022

🙏🙏👍🤐

Like

©Alochane.com 

bottom of page