ಭಸ್ಮಾಸುರ
- ಆಲೋಚನೆ
- Mar 11, 2022
- 1 min read
ನಾವು ಒಂದು ಭಸ್ಮಾಸುರನನ್ನು ಸೃಷ್ಟಿ ಮಾಡಿದ್ದೇವೆ
ನಮ್ಮನ್ನು ಅಟ್ಟಾಡಿಸಿಕೊಂಡು ಬರುತ್ತಿದೆ
ಮರೆಯಾಗಲು ಜಾಗವಿಲ್ಲ
ಹಗಲಿರುಳು ಓಡುತ್ತಿದ್ದೇವೆ
ಮಕ್ಕಳನ್ನು ಬಗಲಿಗವಚಿ
ಕೈಲಾಗದವರು ಬಿದ್ದಿದ್ದಾರೆ
ಅಳಿದುಳಿದವರು
ಮನೆಮಠ ತೊರೆದಿದ್ದೇವೆ
ಗುಂಪುಗುಂಪಾಗಿ ಗುಳೆ ಎದ್ದಂತೆ
ಕಾಡು ನಾಶವಾಗಿದೆ
ಎಲ್ಲಿ ಅಡಗುವುದು ಗೊತ್ತಿಲ್ಲ
ಸಂಬಂಧಗಳು ನಾಶವಾಗಿ
ನಮಗೆ ನಾವೇ ಮುಖ್ಯವಾಗಿ
ವ್ಯವಧಾನವೇ ಇಲ್ಲದಂತೆ
ಇದೇ ಕೊನೆಯ ಓಟ ಎಂಬಂತೆ
ಜೀವ ಉಳಿಸಿಕೊಳ್ಳಲು
ಬೇಡಿ ತಿನ್ನಲು
ಭಸ್ಮಾಸುರ ಬೆನ್ನು ಹತ್ತಿದ್ದಾನೆ
ಕೈಯ ಎತ್ತಿದ್ದಾನೆ
ಎಲ್ಲಿಗೆ ಓಡುವುದು
ಉರುಟಾಗಿದೆ ಭೂಮಿ
ನಮ್ಮ ಎದೆಗೇ ಬಂದಿದ್ದಾನೆ
ಬಿಸಿಲ ಧಗೆ ಬೇಗೆ
ಓಡುವುದು ಎಲ್ಲಿಗೆ
ಈ ಬಟಾಬಯಲಿನಲ್ಲಿ
ಇನ್ನೀಗ ನಮ್ಮ ತಲೆಯ ಮೇಲೆ
ನಮ್ಮದೇ ಕೈ.
-ಡಾ. ವಸಂತಕುಮಾರ ಪೆರ್ಲ
Comments