ಹೂ ಗಿಡ ಬಳ್ಳಿ ನೆಲದ ಜಿಗುಟು ಶಿರವ
ಸಪಾಟು ಸವರಿ ಹನಿಯಮೃತವುಣಿಸಿ
ಕಾಯಬೇಕೆಂದರೆ
ಸದ್ದಿಲ್ಲದೆ ನಿಯತತೆಯಲಿ
ನಿಡಿದಾದ ಕಣ್ಗಾವಲಿದೆ ಪಹರೆಗೆ
ಚಂಚಲತೆಯಿದೆ ರೆಪ್ಪೆಯಡಿಗೆ
ಮೈಯೆಲ್ಲಾ ಕಣ್ಣೋ!
ಕಣ್ಣೇ ಬಯಲ ಬೆದರು ಚಿತ್ರವೋ!
ಈ ಪಹರೆಗೆ ನಿದ್ದೆಯ ಹಂಗಿಲ್ಲ
ಸಾಕಾಗಲ್ಲ
ಎರಡು ನಿರ್ಮೀಲಿತ ನೇತ್ರ
ಹರಡಿದೆ ಜಗದಗಲ ಧನ ಕನಕ ಸಾಮ್ರಾಜ್ಯ
ಕಾಯಬೇಕಿರುವುದು ಪೀಠವಾ?
ಪೀಠಾರೋಹಿಯಾ?
ನಿಕ್ಕಿಯಾಗಬೇಕಿದೆ ಇನ್ನಷ್ಟೆ
ಈ ಪಹರೆಗೆ ಮಿತಿಗಳ ಹಂಗಿಲ್ಲ
ಆಗಸಕ್ಕೆ ಕೊಡೆ ಹಿಡಿಯುವ ಜರೂರತ್ತುಗಳ ನಡುವೆ
ಇದ್ದೂ ಇಲ್ಲವೆಂಬ ಅವಕಾಶದ ಕೊಲೆಯ ನಿತ್ಯ ನರ್ತನದಲ್ಲಿ
ಬೇಕು ಬೇಡಗಳ ಕಂಠಮರ್ಧನದ ಚಣಗಳು
ನಿಕಾಲೆಯಾಗದೆ ಅಂತರಪಿಶಾಚಿಯಾಗಿ
ಅನುರಣಿಸುತಿದೆ ಅನುದಿನ
ಪೇಟೆ ಸುತ್ತುತ್ತಿವೆ ಕೊಳ್ಳುವವರಿಲ್ಲದೆ ಕನಸುಗಳು ಕೊರಗಿ
ಲಕ್ಷ ಲಕ್ಷ ಭಕ್ಷ್ಯಗಳಿರುವಲ್ಲಿ
ಈ ಪಹರೆಗೆ ಭಕ್ಷೀಸಿನ ಹಂಗಿಲ್ಲ
ನೆಲ ಮುಗಿಲಾಚೆ ಒಂದು ಪಯಣವಿದೆ
ಪಯಣದುದ್ದಕ್ಕೂ ಪಹರೆ ಇದೆ
-ಮಂಜುನಾಥ ನಾಯ್ಕ ಯಲ್ವಡಿಕವೂರ