ನಾನೇನೂ ಹೇಳುವದಿಲ್ಲ
ನಿಮಗೆಲ್ಲವೂ ಗೊತ್ತು
ಗೊತ್ತಿದ್ದರೂ ನೀವು ಮಾತನಾಡುವದಿಲ್ಲ
ನೀವು ಮಾತನಾಡದಿದ್ದರೂ
ನನಗೆ ಗೊತ್ತು
ನಿಮಗೆಲ್ಲವೂ ಗೊತ್ತಿದೆಯೆಂದು
ಅದಕ್ಕೇ
ನಾನೇನೂ ಹೇಳುವದಿಲ್ಲ.
*
ಎಲ್ಲವೂ ಎಲ್ಲರಿಗೂ
ಗೊತ್ತಿರಲೇಬೇಕೆಂದೇನಿಲ್ಲ,
ಗೊತ್ತಿದ್ದರೂ ಹೇಳಲೇಬೇಕೆಂದೇನಿಲ್ಲ
ಹೇಳಿದರೂ ಅದು ಎಲ್ಲರಿಗೂ
ತಿಳಿಯಲೇಬೇಕೆಂದೇನಿಲ್ಲ
ತಿಳಿದವರು
ತಿಳಿದಿದೆ ಎಂದು ಹೇಳುವದಿಲ್ಲ;
ತಿಳಿಯದವರು ಹೇಳಿದರೆ
ಅದು ನಮಗೆ ತಿಳಿಯುವದೂ ಇಲ್ಲ
ಅದಕ್ಕೇ ನಾನೇನೂ ಹೇಳುವದಿಲ್ಲ
ಏಕೆಂದರೆ
ಹಿಂದೆ ಹೇಳಿದ್ದೇ
ಇನ್ನೂ ಜೀರ್ಣವಾಗಿಲ್ಲ
*
ಇಲ್ಲಿ ಅಕ್ರಮಗಳು
ಸಕ್ರಮವಾಗುತ್ತವೆ,
ಇಲ್ಲಿ ಅಯೋಗ್ಯರು
ಯೋಗ್ಯರೆನಿಸುತ್ತಾರೆ
ಇಲ್ಲಿ ಭ್ರಷ್ಟತೆ ವರವಾಗುತ್ತದೆ,
ಇಲ್ಲಿ ಪ್ರಾಮಾಣಿಕತೆ
ಶಾಪವಾಗುತ್ತದೆ,
ಇಲ್ಲಿ
ಸುಳ್ಳು ಹೇಳಿದವರು
ಅರಮನೆಯೊಳಗಿರುತ್ತಾರೆ
ಸತ್ಯ ಹೇಳಿದವರು
ಸೆರೆಮನೆಯೊಳಗಿರುತ್ತಾರೆ
ಇಲ್ಲಿ
ಸತ್ಯ ನ್ಯಾಯ ಕಾನೂನುಗಳ
ಮಾರಾಟ ಮಾಡುವವರೂ ಇದ್ದಾರೆ
ಕೊಳ್ಳುವವರೂ ಇದ್ದಾರೆ;
ಇಲ್ಲಿ
ಭಗವದ್ಗೀತೆ, ಕುರಾನು,
ಬೈಬಲ್ಲುಗಳ ಮುಟ್ಟಿಯೇ
ಸುಳ್ಳು ಹೇಳುವವರಿದ್ದಾರೆ,
ಮತ್ತೆ
ನಾನು ಹೇಳುವದೆಲ್ಲ ಸತ್ಯ ಎನ್ನುತ್ತಾರೆ,
ಸತ್ಯ ಸುಳ್ಳಾಗುವದಕ್ಕೆ
ಸುಳ್ಳು ಸತ್ಯವಾಗುವದಕ್ಕೆ
ಹೆಚ್ಚು ಹೊತ್ತು ಬೇಕಿಲ್ಲ,
ಸ್ವಲ್ಪ ಹಣ ಬೇಕು, ಅಷ್ಟೇ
*
ಗಾಂಧೀಜಿ ಹೇಳಿದ್ದಾರೆ-
" ಕಿವಿ, ಕಣ್ಣು , ಬಾಯಿ
ಎಲ್ಲಮುಚ್ಚಿಕೊಳ್ಳಿ"
ಅದಕ್ಕೇ ನಾವು ಪ್ರತಿಜ್ಞೆ ಮಾಡಿದ್ದೇವೆ
" ಒಳ್ಳೆಯದನ್ನು ನೋಡುವದಿಲ್ಲ
ಒಳ್ಳೆಯದನ್ನು ಮಾಡುವದಿಲ್ಲ
ಒಳ್ಳೆಯದನ್ನು ಕೇಳುವದಿಲ್ಲ"
ಆದ್ದರಿಂದ
ನನ್ನನ್ನೇನೂ ಕೇಳಬೇಡಿ
ನಾನೇನೂ ಹೇಳುವದಿಲ್ಲ;
ಹೇಳಿದರೆ ನೀವೂ
ಕೇಳುವದಿಲ್ಲ.
- ಎಲ್. ಎಸ್. ಶಾಸ್ತ್ರಿ

ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ ( ಎಲ್. ಎಸ್. ಶಾಸ್ತ್ರಿ) ಬರವಣಿಗೆಯ ಕಾಯಕದಲ್ಲಿ ತಮ್ಮನ್ನ ಸಂಪೂರ್ಣವಾಗಿ ತೆತ್ತುಕೊಂಡಿರುವ ಶ್ರೀಯುತರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು.ಪತ್ರಿಕೋದ್ಯಮದಲ್ಲಿ ೫೬ ವರ್ಷಗಳ ಅಖಂಡ ಸೇವೆ. ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ , ಲೋಕದರ್ಶನ, ಶೃಂಗಾರ, ನವಕಲ್ಯಾಣ, ದೀನವಾಣಿ, ಜನತಾ, ನವನಾಡು, ಕರ್ನಾಟಕ ಮಲ್ಲ ಮೊದಲಾದ ದಿನಪತ್ರಿಕೆ, ಸಾಪ್ತಾಹಿಕಗಳಲ್ಲಿ ಸಂಪಾದಕ, ಉಪಸಂಪಾದಕ, ವರದಿಗಾರನಾಗಿ ಕಾರ್ಯ ನಿರ್ವಹಣೆ. ಹತ್ತು ಸಾವಿರ ಸಂಪಾದಕೀಯಗಳು, ಎರಡು ಸಾವಿರ ಮುನ್ನುಡಿಗಳು. ಹೀಗೆ ಪಾದರಸದಂತೆ ಚಲನಶೀಲರಾಗಿರುವ ಎಲ್ಎಸ್ಎಸ್ ಅವರಿಗೆ ೭೬ ಅಂದರೆ ನಂಬುವುದು ಕಷ್ಟ.ಅವರು ನಿತ್ಯ ಯುವಕರು.- ಸಂಪಾದಕ.
Comments