top of page

ನುಡಿ ಕತ್ತಿ


ಕಾಸಿ ತಂದಿಟ್ಟ ಕತ್ತಿಯ

ಮಸೆಯದೇ ಬಾಯಿ

ಹರಿತ ಆಗದು,

ಮಾತಿನಂತೆ!

ಕೇಳಿದ ನೋಡಿದ ಓದಿದ

ವಿಷಯಗಳ ಮಿದು ಕಲ್ಲ

ಮೈಯ ನುಣುಪಿಗೆ,

ಬಲ್ಲ ಅರಿವಿನ ಅಸಿಯ

ಹದವಾಗಿ ಹಿತವಾಗಿ

ಎಲ್ಲೂ ಕೊಯ್ಯದ ಹಾಗೆ ಮೈಯ

ಉಜ್ಜಬೇಕು,ಚಕಚಕಾ ಹೊಳೆಯುವಂತೆ-

ಕಜ್ಜಕ್ಕೆ ನೆರವಿಷ್ಟು ಬರುವ ಹಾಗೆ,

ನುಡಿಯನಂತೇ.

ಕಾದಲಾಗದು ರಣವ

ಬೆನ್ನ ಬತ್ತಳಿಕೆಯಲಿ

ಬಾಣ ಇರದೆ,

ಗೆಲ್ಲಲಾಗದು ಬಾಳು:

ಅರಿವಿನ ಮಿರುಗುವ

ಅಸಿ ಇಲ್ಲದೆ!


*ಗಣಪತಿ ಗೌಡ,ಹೊನ್ನಳ್ಳಿ*

ನಮ್ಮ ನಡುವಿನ ಸಶಕ್ತ ಕವಿ ಗಣಪತಿ ಗೌಡ ಹೊನ್ನಳ್ಳಿ ಅವರು ಬರೆದ " ನುಡಿ ಕತ್ತಿ" ಎಂಬ ಕವನ ನಿಮ್ಮ ಓದು ಮತ್ತು ಪ್ರತಿಕ್ರಿಯೆಗಾಗಿ. ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ.ಕಾಂ

25 views0 comments

Commentaires


bottom of page