ಯಾರನ್ನಾದರೂ ಏನ ಕೇಳುವುದಿದೆ?
ಕೇಳಲು ಉಳಿದಿರುವುದಾದರೂ ಏನು ನೀನೇ ಇಲ್ಲದ ಮೇಲೆ!
*
ಹತ್ತು ದಿಕ್ಕಿಗೂ ಹುಡುಕಾಡಿದೆ ಹುಚ್ಚನಂತೆ
ಹಿಡಿದ ಹುಚ್ಚು ಮತ್ತಷ್ಟು ಗಟ್ಟಿಯಾಯಿತು ನೀ ಕಾಣದೆ
*
ಎದುರಾದವರೆಲ್ಲಾ ದಿಟ್ಟಿಸಿ ನೋಡಿ ಹೋಗುತ್ತಿದ್ದಾರೆ
ನೀನು ನನ್ನ ಕಣ್ಣೊಳಗೇನಾದರೂ ಅವಿತುಕೊಂಡಿರುವೆಯಾ??
*
ರೆಪ್ಪೆ ಮುಚ್ಚಿದರೆ ಕಡಲು ಉಕ್ಕಿ ಹರಿವುದು
ಹಾಯಿ ದೋಣಿಯ ಬಟ್ಟೆ ಆಕಾಶವ ಹೊದ್ದಿದೆ
*
ಮರಗಿಡಗಳೂ ಮೌನ ತಾಳಿವೆ
ಜೀವವಿರದ ಈ ದೇಹ ದಿಗಿಲುಗೊಂಡಿದೆ
*
ಬೆಳ್ಳಕ್ಕಿ ಯಾಕೋ ಮುಗಿಲಕಡೆ ನೋಡುತಿದೆ
ಈಗತಾನೇ ನೀನು ನಭಕೆ ಹಾರಿಕೊಂಡಂತೆ ಕಾಣುತಿದೆ
*
ಒಂಟಿತನಕೆ ಯಾಕಿಷ್ಟು ಆತಂಕ?
ನೀನು ಕೊಟ್ಟ ಪ್ರೀತಿಯ ಸವಿಮುತ್ತು ಇದ್ದ ಕಾಲಕ್ಕೂ
*
ಹಗಲನೇಗೋ ಕಳೆದುಬಿಡುವೆ ಬೆಳಕಿನ ಜೊತೆಗೂಡಿ
ಇರುಳು ನಿನ್ನ ನೆನಪ ಹೆಣವ ತಂದು ಸುರಿಯುತಿದೆ ಅಂಗಳಕೆ
*
ನೀನಲ್ಲದೆ ಚಂದಿರ ಉರಿವ ಸೂರ್ಯನಿಗೂ ಮಿಗಿಲಾಗಿರುವ
ಅವನ ಬೆಳದಿಂಗಳ ಬೆಂಕಿ ಕನಸುಗಳ ಸುಟ್ಟು ಕೇಕೆ ಹಾಕಿದೆ
*
ವಿ.ಹರಿನಾಥ ಬಾಬು ಸಿರುಗುಪ್ಪ
ಉಪ ನಿರ್ದೇಶಕರು
ಜಿಲ್ಲಾ ಖಜಾನೆ ರಾಯಚೂರು
top of page
bottom of page
Comments