ದೀಪಾವಳಿಯ ಸಣ್ಣ ಹಬ್ಬದ
ದಿನವೇ ಅವಳು
ವಿಧವೆಯಾದಳು..
ಅವಳ ಬದುಕಿನ ದೀಪ
ದೀಪ ಆರಿಯೇ ಹೋಯಿತು ಎಂದು ದಣಪೆ ಕಟ್ಟೆಗಳು
ಮಾತನಾಡಿಕೊಂಡವು..
ಆದರೆ ಬತ್ತೇ ಹೋಗಿದ್ದ
ಅವಳ ಕಣ್ಣುಗಳಂಚಲ್ಲಿ
ಅಂದೇ ಸಣ್ಣ ನೆಣೆ
ಹೊತ್ತಿಕೊಂಡಿರಬೇಕು
ಕಂಡೂ ಕಾಣದ ಹಾಗೇ
ಕಣ್ತುದಿಯ
ಹಣತೆ ಬೆಳಗಿತು..
ಹಸಿವನ್ನೇ ಮರೆತು
ಮುರುಟಿದ ಹೊಟ್ಟೆ
ಮತ್ತೆ ಸಡಿಲವಾಯಿತು..
ಅರೆ ಅವನು ಮೈಯಲ್ಲಿ ಎಬ್ಬಿಸಿದ್ದ
ಬರೆಗಳು ಸುಟ್ಟ
ಗಾಯಗಳೆಲ್ಲ ಸುರುಸುರು
ಬತ್ತಿಗಳ ಚಿತ್ತಾರ..
ಗಂಡನ ಶವದ ಮುಂದೆ
ನಕ್ಕೇ ನಕ್ಕ ಅವಳನ್ನು
ನೋಡಿ ಹುಚ್ಚೇ ಹಿಡಿಯಿತೆಂದು
ದಣಪೆ ಕಟ್ಟೆಗಳು
ಮತ್ತೆ ಮಾತನಾಡಿಕೊಂಡವು
ಸಂಧ್ಯಾ ವಿನಾಯಕ ಅಘನಾಶಿನಿ
Comments