ನಾನರಿಯಲಾಗದ ಶೂಲೆಗಳೇ
ಆಪ್ತವಾಗಿ ನನ್ನನ್ನು
ಬಿಗಿದಪ್ಪಿಕೊಂಡಾಗ
ಬದುಕು ಬರಡಾಗಿ
ಬೆಂಬಿಡದೆ ಕಾಡಿದಾಗ
ನನಗನಿಸುತ್ತದೆ,
ನಾನೊಮ್ಮೆ ಜ್ವಾಲಾಮುಖಿಯಂತೆ ಭುಗಿಲೇಳಬೇಕು!
ಕಳೆದುಕೊಂಡ ಮಧುರವಾದ ಪ್ರೇಮ
ನೆನಪಿನಾಳದಲಿ ಪುಟಿದೆದ್ದು ಕೂತಾಗ
ನನ್ನ ನಿಟ್ಟುಸಿರಿನಲೂ ಮಿಣುಕು ಹುಳುವಂತೆ ಮಿನುಗ ತೊಡಗಿದಾಗ
ನನಗನಿಸುತ್ತದೆ,
ನಾನೊಮ್ಮೆ ಅಗ್ನಿ ಪರ್ವತದಂತೆ ಧಗಧಗಿಸಿ ಉರಿಯಬೇಕು!
ಕಗ್ಗತ್ತಲ ವೇಳೆಯಲಿ
ನಿಶ್ಯಬ್ದ ನೂರಾರು ಬಯಕೆಗಳ ಹೊತ್ತ
ದೂರ ದೂರ ನೇರ ಹಾದಿಗಳಲಿ ನೀರವತೆಯೇ ಮುಗುಳ್ನಕ್ಕಾಗ
ನನಗನಿಸುತ್ತದೆ,
ನಾನೊಮ್ಮೆ ಶಿವನಂತೆ ರುದ್ರವಾಗಿ ನರ್ತಿಸಬೇಕು!
ಏಕಾಂತದಲಿ
ಮರೀಚಿಕೆಯಂತ ಕನಸುಗಳು ಎಡಬಿಡದೆ ತಿವಿದಾಗ
ಹಿಂದಿನ ಕಹಿ ನೆನಪೇ ತುಡಿದಾಗ
ಕಂಬನಿಯೇ ಬೇರುರಿದಾಗ
ನನ್ನೆದೆಯ ಶರಧಿಯಲಿ
ಮತ್ತೆ ಮತ್ತೆ ಪ್ರವಾಹ ಬಂದೆರಗಿದಾಗ
ನನಗನಿಸುತ್ತದೆ,
ನಾನು ಹೀಗೆಯೆ ಕಾವ್ಯವಾಗಿ ಮಂಜುಗಡ್ಡೆಯಂತೆ ಕರಗಿಬಿಡಬೇಕು!.
- ಪೂಜಾ ನಾರಾಯಣ ನಾಯಕ
(BSc ದ್ವಿತೀಯ ವರ್ಷ)

ಪೂಜಾ ನಾರಾಯಣ ನಾಯಕ ಕುಮಟಾ ತಾಲೂಕಿನ ಮಾಸ್ಕೇರಿಯವರು.ವಿಜ್ಞಾನ ವಿಷಯದ ವಿದ್ಯಾರ್ಥಿಯಾಗಿರುವ ಅವರು ಕವಿತೆ, ಕತೆಗಳ ಬರವಣಿಗೆ ಮತ್ತು ಸಾಹಿತ್ಯದ ಓದಿನಲ್ಲಿ ಆಸಕ್ತರು ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕರು.
ಧನ್ಯವಾದ ಮೇಡಂ
ಶೋಷಣೆಗೆ ಪ್ರತಿಭಟಿಸುವ ಹೆಣ್ಣಿನ ಮನಸ್ಥಿತಿಯು ಕಾವ್ಯವಾಗಿ ಹೊಮ್ಮುವಾಗ ಜ್ವಾಲಾಮುಖಿ, ಅಗ್ನಿಪರ್ವತಗಳಂತಹ ಕಠಿಣವಾದ ರೂಪಕಗಳಲ್ಲೇ ಮಿಡಿಯುತ್ತ ಸಮಾಧಾನವನ್ನು ತಾಳುವುದು- ಕವಿತೆಗಿರುವ ಶಕ್ತಿಯನ್ನು ನಿರೂಪಿಸುವಂತಿದೆ..
ನಿಮ್ಮ ಅನಿಸಿಕೆ ಮತ್ತು ಪ್ರೇರಣೆಗೆ ಧನ್ಯವಾದಗಳು.....
ಪೂಜಾ ನಾಯಕರಿಗೆ - ನಿಮ್ಮ ಕವನ " ಕಾವ್ಯವಾಗಿ ಕರಗುತ್ತೇನೆ " ಚೆನ್ನಾಗಿದೆ . ಸಹಿತ್ಯಕವಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ನಿಮ್ಮಲ್ಲಿವೆ . ಕವನದ ಕೊನೆಯಲ್ಲಿ ಮಂಜುಗಡ್ಡೆಯಂತೆ ಕರಗಿಬಿಡಬೇಕು ಚೆನ್ನಾಗಿದೆ .