ಬೇಂದ್ರೆ ಕಾವ್ಯ - ಒಂದು ವಿಶಿಷ್ಟ ಕವನ
***********
***( ಗಂಗಾವತರಣದಿಂದ)
ಏಲಾವನ ಲವಲೀಬನ ಲವಂಗ ಬನಗಳಲೀ
ನಾಗಲತಾ ಸಂಕುಲ ಬನವಾಸಿಯ ಜನಗಳಲೀ
ಲೀಲಾಂದೋಲಿತ ದೋಲಾ ಲಲನಾಮಣಿಗಳಲಿ/ಏಲಾ
ಏಲಾಪದ ಲೀಲಾಪದ ಆಲಾಪದ ಸರಣೀ
ಸಖಸಖಿಯರ ಮೇಳಾಪದೆ ತೆರೆದಿರೆ ಎದೆ ಭರಣಿ
ಆಲಿಸುತಿವೆ ಮಾಲಿಸುತಿವೆ ಹರಿಣದ ಜತೆ ಹರಿಣಿ/
ಙಂ ಞಣನಮಾ, ಅಂ ಜ್ಞ ಓಂ ಜಂ ಸಂ ಶಂ ಎಂಬಾ
ಅಂಬಾಗರೆವುದು ವಾಣಿಯ ವೀಣೆಯು ಬಾಯ್ತುಂಬಾ
ಬಾ ಅಮ್ಮಾ ಅಮಾ ಬಾ ಬಾರೇ ಜಗದಂಬಾ/
ಉಸಿರುಸಿರಲಿ ಸರಿವರಿದೂ ಊದೂದುತ ನಲಿದು
ದನಿಯೆ ನದಿಯೊಲಿ ಚಲಿಸಿತು ಕೊಂಕೊಂಕೆನೆ ಒಲೆದು
ಅಲೆಯಾಯಿತು ಬಲೆಯಾಯಿತು ಜಗದಗಲಕೆ ಸೆಲೆದು/
ಕಿನ್ನರಿ ಕಿನ್ನರಿ ಮಿಥುನವು ಅರೆಅರೆ ಮೈಗೂಡಿ
ನುಡಿಯಲಿ ಹುದುಗಿದ ಹುರುಳೊಳು ಹದುಳದೊಳೊಡಮೂಡಿ
ನಾಲಿಗೆ ನಾಡಿಯನಾಡಿಸಿ ಸ್ವರಮೂರ್ತಿಯ ಮಾಡಿ/
ನರಗಳಲಿಂಗಿಂಗೀ ನರನಾಳದೆ ತಂಗೀ
ಲಾಸ್ಯದಿ ಹಾಸ್ಯವ ಮಿಂಚಿಸಿಪರಶಿವನರ್ಧಾಂಗಿ
ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗೀ/
ನೆಲೆಗೆಡಿಸುವ ವಾಸನೆಗಳ ಎದೆಬೀಜವ ಸೀಳಿ
ರತಿರಮಣನ ನಿಜಜನಕನ ಎದೆಯಾಳವನಾಳಿ
ಹೃದಯಾಕೂತಿಯ ಅನುಪಮ ಲಾವಣ್ಯವ ತಾಳಿ/
ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು
ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು
ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು/
ಯಾಳದ ಜತಿ ಏಳೆಯ ಗತಿ ಏಳೇಳೇಳೆಂದು
ಎಬ್ಬಿಸಿ ಮಬ್ಬನು ಚದುರಿಸಿ ಬಾಳ್ ಬಾಳ್ ಬಾಳೆಂದು
ತಂತಿಯ ತಾಳಕೆ ಮಿಡಿದರೆ , ಎಲ್ಲಾಯಿತು ಒಂದು/
ಏಳೆಯ ಬಸಿರೊಳು ಮಲಗಿದ ಯಾವುದೊ ಗತಿ ಚಿತ್ರ
ದನಿ ಪಡೆದಿತು, ತಿಳಿದೆದ್ದಿತು ಕಣ್ಬಡೆದು ವಿಚಿತ್ರ
ಆ ಕ್ಷಣವನು ಈ ಕ್ಷಣವನು ಮಾಡಿತು ಸುಪವಿತ್ರ/
ಏಲಾವನ...
- ಅಂಬಿಕಾತನಯದತ್ತ
ಇದೊಂದು ಅಪರೂಪದ, ವೈಶಿಷ್ಟ್ಯಪೂರ್ಣವಾದ ಕವನ. ಮೊದಲ ಓದಿಗೆ ಅರಗಿಸಿಕೊಳ್ಳಲಾಗದ ರಚನೆ. ಬೇಂದ್ರೆ ಓರ್ವ ದೃಷ್ಟಾರ ಕವಿ. ಅವಧೂತ ಕವಿ. ಅವರಿಗೆ ಕಾವ್ಯ ಕೇವಲ ಶಬ್ದ-ಯೋಗವಲ್ಲ. ನಾದ-ಯೋಗ. ಅವು ಶಬ್ದಚಿತ್ರಗಳಾಗಿ ನಮ್ಮ ಕಣ್ಣಮುಂದೆ ನಿಲ್ಲುತ್ತವೆ. ಅದರಿಂದ ಹೊರಬರುವ ನಾದದಲ್ಲಿ ನಮ್ಮ ಮನ ಲೀನವಾಗಿಬಿಡುತ್ತದೆ. ಈ ಏಲಾಗೀತದ ಒಳತಿರುಳಿನ ಬಗ್ಗೆ ಬೇಂದ್ರೆಕಾವ್ಯದ ಒಳಹೊಕ್ಕವರೊಬ್ಬರ ವಿವರಣೆಯನ್ನು ನಾಳೆ ನೋಡೋಣ.
- ಲಕ್ಷ್ಮೀನಾರಾಯಣ ಶಾಸ್ತ್ರಿ
........ಬೇಂದ್ರೆ ಮಾಸ್ತರರದು ಋಶಿಸದೃಶ ಕಾಣ್ಕೆ... he saw.. could visualise what others couldn't... he is and remains beyond words...'ಪದ ಗಾರುಡಿಗ' ಅಂತ್ಹೇಳಿ ನಾವು ಸುಮ್ಮನಾಗಿಬಿಡ- -ಬಹುದು...ಒಂದು ಪದಕ್ಕೆ... ಭಾವಕ್ಕೆ... ಅವರಿಗೆ ನೂರೆಂಟು ಅರ್ಥ ಹೊಳೆಯುತಿದ್ದವು : ಅಷ್ಟರ ಮಟ್ಟಿಗೆ ಅವರು ಸಾಹಿತ್ಯದಲ್ಲಿ ಲೀನ...ಧ್ಯಾನಸ್ಥರು...ನಮ್ಮಲ್ಲಿ ನೆಲೆ ನಿಂತು ನಮಗಾಗಿ ಅವರು ಬರೆದರು ...ಇದು ನಮ್ಮ ಮತ್ತು ಭುವನದ ಭಾಗ್ಯ... ಪ್ರಸ್ತುತ ಕವಿತೆ ಹೊಳೆಯಿಸುವ ಅರ್ಥಗಳು ಕಾಣದ...ಅಧ್ಯಾತ್ಮದ... unseen... mystical...ಅಂಚಿಗೆ ಓದುಗನನ್ನು ನಿಲ್ಲಿಸ್ತವೆ....ನಿಬ್ಬೆರಗಾಗಬೇಕು...ಆ ಪದನಾದ ಸಂಚಲನಕ್ಕೆ ಮೈ-ಮನಗಳನ್ನು ಒಡ್ಡಿಬಿಡಬೇಕು...ಅಷ್ಟೇ ನಮ್ಮ ಕಾಯಕ...ಅಜ್ಜನಿಗೆ ನಮೋನ್ನಮಃ....🙏🙏🙏🙏🙏🙏🙏🙏🙏🙏🙏🙏🙏