top of page

ಉರಿಯುವ ಬೆಂಕಿಯೆದುರು

ನಿಮ್ಮ ಬೆಂಕಿಯುಂಡೆಗಳಿಗೆ ಬೋರಲು ಬಿದ್ದ

ನೆರಳಹೆತ್ತ ಈ ಮರ

ಕತ್ತರಿಸಿದ ರೆಂಬೆ ಹಸಿ ಚಿಗುರೆಲೆ

ಅಟ್ಟಹಾಸದ ಕಾದ ಬಾಣಲಿಯೊಂದಿಗೆ ಸೆಣಸಾಡಲು

ದಯೆಯೆಂಬುದು ನಿಮ್ಮ ಪರಿಮಿತಿಯಲ್ಲಿಲ್ಲ


ಕುದಿವ ಕೆನ್ನೀರ ತೊರೆಯೆದುರು

ಮಿಸುಕಾಡದೆ ರಚ್ಚೆಹಿಡಿದು

ಈಜಿ ದಡ ಸೇರಲು

ನಮ್ಮ ಕಂಬನಿಗಳು ಈಜು ಕಲಿತಿಲ್ಲ


ಘರ್ಜಿಸುವ ನಿಮ್ಮ ಹುಲಿ ಸಿಂಹಗಳ

ಬೇಟೆಯ ಮುಷ್ಟಿಯಿಂದ

ನುಣುಚಿಕೊಳ್ಳಲು

ನಮ್ಮ ಹಸು ಎಳೆಗರುಗಳಿಗೆ

ಪರಚುವ ಉಗುರುಗಳ ಬಲವಿಲ್ಲ


ನಮ್ಮ ಮನೆಹೊಸಿಲಲ್ಲಿ ಅಂಬೆಗಾಲಿಕ್ಕುವ

ಬೊಚ್ಚು ಬಾಯ ಹಸುಳೆಗೆ

ದಯೆಯ ಪೊರೆ ಕಳಚಿಕೊಂಡ

ನಿಮ್ಮ ವಿಷದ ಸರ್ಪಗಳ ಹಲ್ಲಿನರಿವಿಲ್ಲ


ನೀವಿನ್ನೂ

ನೆತ್ತರ ದಾಹದಲ್ಲಿ

ಅಲ್ಲಲ್ಲಿ ತಲೆಯೆತ್ತಿದ ಜೋಪಡಿಯ

ಜೋಗುಳದ ಲಾಲಿಗೆ ತಲೆದೂಗುವ

ತೂಗುತೊಟ್ಟಿಲ ಧ್ವನಿ

ಕ್ಷೀಣಿಸಿ.. ಕ್ಷೀಣಿಸಿ..ಕ್ಷೀಣಿಸಿ...

ಲಾಲಿಹಾಡಿನ ಮೇಲೆ

ಬಿರುಗಾಳಿಯ ಚೈತ್ರಯಾತ್ರೆ


ನಿಮ್ಮೀ

ಬೆಂಕಿಚೆಂಡುಗಳ ದಟ್ಟ ಹೊಗೆಯೊಳಗೆ

ನಮ್ಮೀ ಕಂಬನಿಗಳ ನೀರಾವಿ

ಮೋಡಕಟ್ಟುತ್ತಿವೆ

ಬೆಂಕಿಯ ದಾಹದೆದುರು

ಎದೆಗುಂದಿದೆ ಮಳೆ

ಹುಣ್ಣಿಮೆಯ ರಾತ್ರಿಯಲ್ಲೇ

ಬೆಳದಿಂಗಳ ಕಗ್ಗೊಲೆ


ಈಗ

ಉರಿಯುವ ಬೆಂಕಿಯೆದುರು

ಮೌನದ್ದೇ ಕಾರುಬಾರು


ಮಂಜುನಾಥ ನಾಯ್ಕ ಯಲ್ವಡಿಕವೂರ

Recent Posts

See All
ಮಾತನಾಡುವ ಕಷ್ಟ!

ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...

 
 
 
ಬೆಪ್ಪುತಕ್ಕಡಿ

ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.

 
 
 
ಅಹಮಧಿಕಾರ

ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....

 
 
 

Comments


©Alochane.com 

bottom of page