ಕೆಂಪಿರುವೆ ಕಪ್ಪಿರುವೆ
ಕೆಂಪನೆ ಕಪ್ಪನೆ ಮಣ್ಣಿನಲಿ
ಅಂದದ ಹುತ್ತವ ಕಟ್ಟಿ
ಬಾಳುತ್ತಲಿದ್ದವು ಒಟ್ಟಿಗೆ
ಚೆಂದದ ಸುಂದರ ಕಾಡಿನಲಿ
ಅನ್ನದ ಅಗಳ ಸಕ್ಕರೆ ಕಾಳು
ಸಿಕ್ಕರೆ ಸಾಕು ತಿನ್ನುತಲಿದ್ದವು
ಸ್ನೇಹದಿ ಒಟ್ಟಿಗೆ ಹಂಚಿ
ನೆಮ್ಮದಿ ಬದಕು ಸಾಗಲು
ಬಂದಿತು ಎರಡಲಿ ಜಂಭು
ನನ್ನಯ ಬಣ್ಣ ಸುಂದರ
ನಿನ್ನಯ ಬಣ್ಣ ಸುಂದರ
ಎನ್ನುತಾ ಕದನಕೆ
ನಿಂತವು ಕೋಪದಲಿ
ಕೆಂಪನೆ ಇರುವೆ ಒಂದು ಕಡೆ
ಕಪ್ಪನೆ ಇರುವೆ ಒಂದು ಕಡೆ
ಹತ್ತಿತು ಕದನ ಕಟ್ಟ ಕಡೆ
ಕೆಂಪನೆ ಇರುವೆ ಬಂದು
ಕೆಡವಿತು ಕಪ್ಪನೆ ಹುತ್ತಾ
ಕಪ್ಪನೆ ಇರುವೆ ಹೋಗಿ
ಕೆಡವಿತ್ತು ಕೆಂಪನೆ ಹುತ್ತಾ
ಕದನ ಹತ್ತಿತು ಕಟಾ ಕಟಾ
ಬಂದಿತು ಮಳೆಯು ರಪಾ ರಪಾ
ತೊಯಿತು ಭೂಮಿ ಥಪಾ ಥಪಾ
ಮನೆಯೆ ಇಲ್ಲದ ಇರುವೆಗಳು
ಹರಿಯುತ ನಡೆದವು ನೀರಲ್ಲಿ
ಸತ್ತವು ಹಲವು ಇರುವೆಗಳು
ಕಷ್ಟವೆ ಕಷ್ಟ ಎಲ್ಲ ಕಡೆ
ಹರಿಯುತ ನಡೆದ ಇರುವೆಗಳ
ನೋಡಿತು ಗೆಳೆಯ ಪಾರಿವಾಳ
ಬೀಸಿತು ಎರಡು ಎಲೆಯನ್ನು
ಕೂತವು ಇರುವೆ ಎಲೆಯಲ್ಲಿ
ಮೆಲ್ಲಗೆ ಬಂದವು ದಂಡೆಯಲಿ
ಧನ್ಯವ ನಮಿಸಿ ಗೆಳೆಯನಿಗೆ
ನಡೆದವು ಎಲ್ಲವು ಹುತ್ತಿನಡೆ
ಜಂಭವ ಬಿಟ್ಟ ಇರುವೆಗಳು
ಬದುಕಲು ಕಲಿತವು ಸ್ನೇಹದಲಿ
ಸಾಗುತಲಿದ್ದವು ಶಾಂತಿಯಲಿ.
- ಮಲಿಕಜಾನ ಶೇಖ, ಅಕ್ಕಲಕೋಟೆ, ಸೊಲ್ಲಾಪುರ
ಮಲಿಕಜಾನ ಶೇಖ ಅವರು ಗಡಿನಾಡಿನ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನವರು. ಇವರು ಮರಾಠಿ ನೆಲದಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕನ್ನಡ ಬಳಗ ಕಟ್ಟಿಕೊಂಡು ಗಡಿನಾಡಿನಲ್ಲಿ ಕನ್ನಡ ಬೆಳೆಸುವ ಕಾಯಕದ ಜೊತೆ ಸಾಹಿತ್ಯದಲ್ಲಿ ಅನುವಾದ, ಮಕ್ಕಳ ಸಾಹಿತ್ಯ ಮತ್ತು ವಿವಿಧ ಪತ್ರಿಕೆಗಳಿಗೆ ಲೇಖನ ಬರೆದಿದ್ದಾರೆ.ಕನ್ನಡದ ಕಟ್ಟಾಳು,ಕವಿ,ಸಂಘಟಕ,ಸಹೃದಯಿ ಮಲಿಕಜಾನ ಶೇಖ ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ.
ಇರುವೆಗಳ ಕಾಳಗ ಹಾಗೂ ಮಳೆಯಲ್ಲಿ ತೋಯಿದು ನೀರಲ್ಲಿ ಹರಿಯವ ಇರುವೆಗಳಿಗೆ ಪಾರಿವಾಳ ಬೀಸಿದ ಎಲೆಗಳಿಂದ ಮೇಲೆ ಬಂದು ಶಾಂತಿ ಹಾಗೂ ಸ್ನೇಹದಿಂದ ಬದುಕಿನ ಪಾಠವನ್ನು ಕಲಿಸಿದ ಈ ಪದ್ಯ ಚೆನ್ನಾಗಿ ಹಾಗೂ ಸ್ವಾರಸ್ಯಕರ ಹಾಗೂ ಆನಂದಾಯಕವಾಗಿ ಮಕ್ಕಳಿಗೆ ತಿಳಿಯುವಂತೆ ಮೂಡಿ ಬಂದಿದೆ ಗುರುಗಳೇ ಧನ್ಯವಾದಗಳು.... ತುಂಬಾ ಉತ್ತಮ ಕವನ
ಕವಿತೆ ಪ್ರಕಟಣೆ ಮಾಡಿದ್ದಕ್ಕೆ
ಆಲೋಚನೆ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು...