ಆಗಸದ ಅರಸನಿಗೆ ಗ್ರಹಣ ಸರಿವ ಕ್ಷಣ;
ಕಾರ್ಮೋಡವು ಜೀವಹನಿಯಾಗಿ ಧ್ವನಿಯಾಗಿ;
ವಸುಂಧರೆಯ ಮೈಪುಳಕಗೊಂಡ ಕ್ಷಣ;
ಗರ್ಭದೊಳಗಣ ಕೂಸು ಪ್ರಸವಿಸಿದೆಡೆ,
ಜಗದ ಹನಿಯಾಗಿ ಮಾರ್ಧನಿಯಾದ ಕ್ಷಣ;
ಬೀಜವೊಂದು ಮೊಳಕೆಗೆ ಸಾಕ್ಷಿಯಾದ ಕ್ಷಣ.
ಕಾರುಣ್ಯದ ಬೇರು ಎದೆಯಲಿ ಹೆಮ್ಮರವಾದ ಕ್ಷಣ;
ಹೃದಯದಲಿ ಪ್ರೇಮಭಾವ ಉಕ್ಕಿ ಕಣ್ಣೀರಾದ ಕ್ಷಣ;
ಜಗದ ಹೃದಯಗಳಲಿ 'ನಾನು' ಪ್ರತಿಧ್ವನಿಸಿದ ಕ್ಷಣ;
ಕಡಲು ಶಶಿಯಬಿಂಬಕೆ ಪ್ರವರ್ತಿಸಿ ನೃತ್ಯವಾಗುವ ಕ್ಷಣ;
ಹಸಿದ ಒಡಲುಗಳು ಸತ್ವ ತುಂಬಿ ನಗೆ ಬಿರಿದ ಕ್ಷಣ; ಮನವು 'ಅಮನ'ವಾಗಿ ಇರವು ಅರಿವಾಗಿ ನಿಂತ ಆ ಕ್ಷಣ.
ಕಾದಿದೆ ಆ ಒಂದು ಕ್ಷಣಕೆ.....
ಜೀವ ಭಾವವಾಗಿ, ಕಾಮ ಪ್ರೇಮವಾಗಿ;
ಶಿವ ಶಿವೆಯರ ಮಿಲನದಲಿ ನಾಟ್ಯರಸಗಂಗೆಯಾಗಿ;
ಹೃದಯ ಮಂದಿರವೆ ನಟರಾಜನ ಅಂಗಳವಾಗಿ;
ಅಂತರಂಗಬಹಿರಂಗದ ಅರುವು ಒಂದಾದ ಕ್ಷಣಕೆ.
ನನ್ನಿರವೇ ನಗೆಯಾಗಿ, ಅರಿವಾಗಿ,ಮರವಾಗಿ;
ಫಲವಾಗಿ ನೆರಳಾಗುವ ಕ್ಷಣಕೆ ಕಾದಿದೆ ಅನವರತ...!!
ಉಂಚೋಡಿ ತಿಮ್ಮಪ್ಪ.
Commentaires