top of page

ಅವಿಶ್ರಾಂತ

ವಿಶ್ರಾಂತರೆಂದು ಹೇಳಿದವರು ಯಾರು? ಎದ್ದು ನಿಲ್ಲಿ

ಆಲಿಸಿರಿ ಇಲ್ಲಿ ಗೊತ್ತಿದೆಯೆ ನಿಮಗೆ

ಅವಿಶ್ರಾಂತ ಸತ್ಯಾನ್ವೇಷಕ ಈತ

ಅರಿವು ಅಕ್ಷರದ ಸಂಗಾತಿಯೀತ


ಮಾತು ಮೃದು ಸುಭಗರಿಗೆ ಮುದ್ದು

ಹದ್ದು ಮೀರಿದರೆ ಗಟ್ಟಿ ಗುದ್ದು

ಸದ್ದಿಲ್ಲ ಚಲನೆಯಲಿ ಗಾಢ ಮೌನದ ಜಿದ್ದು

ನೋವು ತಲ್ಲಣಕೆ ಕನಲಿ ಓಡೋಡಿ ಬರುವ ಎದ್ದುಬಿದ್ದು


ಇಳಿಯುತ್ತಾನೆ ಆಳಕ್ಕೆ ಏರುತ್ತಾನೆ ಎತ್ತರಕೆಕ

ವಿಸ್ತರಿಸಿ ಭೂಮಿಯ ಹಲದಿ ಹೂಡುತ್ತಾನೆ

ಪ್ರೀತಿ ಬತ್ತಲು ಜಗವ ಹದ ಮಾಡಲಿಕ್ಕೆ


ಜನಪದ ಮನಸು ಕುದಿದು ಕೆನೆಯುವ ಕನಸು

ಭಂಡ ಬಾಳಿನ ಎದುರು ಕೆಂಡದುಂಡೆ ಈತ

ಬಂಡೆಯೂ ತುಂಡಾದೀತು ಈತ ಭೀಮ

ಅಬ್ಬಾ ಇವನಿಗದೆಷ್ಟು ಆಯಾಮ !


ಬಕಧ್ಯಾನಿಗಳ ಮಿಕದ ಬೇಟೆಗೆ ಕನಲಿ

ಕಾಲ ಕಾಲನ ಕಟ್ಟಿ ಹಿಂದೊತ್ತಿ

ಕಾಲಲ್ಲಿ ಕತ್ತಲೆಯ ತುಳಿದು ಮೆಟ್ಟಿ

ಹಿಡಿಯ ಸೂಡಿಯ ಹುಡುಕುತ್ತಾನೆ

ನಿಜದ ಜಗವನ್ನು ಸ್ನಿಗ್ಧತೆಯ ಜಾಗವನ್ನ


ಹಾವು ಕಂಡು ಹೂವು ಕನಲಿದೆ

ಹಾವ ಭಾವಕೆ ಮನಸು ಉರಿದಿದೆ

ಕಂಟಕದ ಜನ ಕಂಡ ಈ ಒಂಟಿ ಜೀವ

ಮುಳ್ಳು ಕಂಟಿಯ ನಡುವೆ ಸಿಡಿಮಿಡಿದಿದೆ


ಕಂಡೂ ಕಾಣದ ಕುರುಡು ಹಿಂಡಿನ ನಡುವೆ

ಹಿಡಿದಿರುವುದು ದೀಪವಲ್ಲ ಕೆಂಡಕಾರುವ ಜ್ವಾಲೆ

ಶ್ರೀಪಾದ ಸಂಕಲ್ಪ ಸಾರ್ಥಕಗೊಂಡಿತು

ಪರಮ ಶ್ರೇಷ್ಠಿಯ ಇಷ್ಟ ಪುಷ್ಟವಾದೀತು.


ಸುಬ್ರಾಯ ಮತ್ತಿಹಳ್ಳಿ.

34 views0 comments

Comentários


bottom of page