ಅರಿಯದಾದೆ
- shreepadns
- Apr 17, 2024
- 1 min read
ನನ್ನೊಳಗ ನಾ ಅರಿಯದೆ
ಇಷ್ಟು ವರುಷ ಬದುಕಿದೆ
ನನ್ನಹಮಿಕೆಯ ತೊರೆಯದೆ
ಸಾಧಿಸಿದೆನು ಎಂಬ ಭಾವ
ಮೇಲೆದ್ದು ಮೆರೆಯಿತೆ
ಘನದ ಕಾರ್ಯವಾಯಿತೆಂದು
ಮನಕೆ ಮುಸುಕು ಕವಿಯಿತೆ ?
ದೇಹ ಜೀವ ನನ್ನದಲ್ಲ
ಎಂಬ ಅರಿವು ಹೋಯಿತೆಲ್ಲಿ
ಮೋಹ ಮಾಯೆ ಮನದಿ ಕುಳಿತು
ಯಾಕೆ ಗರುವ ಮೂಡಿತೊ
ಮನವು ನಿನ್ನಲಿರಲೇ ಇಲ್ಲ
ತನುವು ಸುಖವ ಬಯಸಿತಲ್ಲ
ಕೊನೆಯವರೆಗೂ ನಾನೆ ಎಂಬ
ಹಮ್ಮು ಹೆಡೆಯೆತ್ತಿತಲ್ಲ
ಈ ಕ್ಷಣ ಮಾತ್ರ ನನದು
ಮುಂದಿನದೆಲ್ಲ ನಿನ್ನ ಚಿತ್ತ
ಎಂಬ ಸತ್ಯದ ಅರಿವಿದ್ದೂ
ಕಣ್ಣು ಕುರುಡಾಯಿತಲ್ಲ
ನಾನು ನಿನ್ನ ಕೈಯ ಗೊಂಬೆ
ಈಗ ನಿನಗೆ ಶರಣು ಎಂಬೆ
ಸೂತ್ರಧಾರ ನೀನೇ ಅಹುದು
ನಿನ್ನ ಮಾಯೆ ಅರಿಯದು
ವೆಂಕಟೇಶ ಬೈಲೂರು
ಗದ್ಯ ಪದ್ಯಗಳ ಬರವಣಿಗೆಯಲ್ಲಿ ಪರಿಣತರಾಗಿರುವ ಶ್ರೀ ವೆಂಕಟೇಶ ಬೈಲೂರು ಅವರು ನಮ್ಮ ಬಳಗದ ಸಂವೇದನಾಶೀಲ ಬರಹಗಾರರು.ಸಮಕಾಲೀನ ವಿದ್ಯಮಾನಗಳನ್ನು ಗಮನಿಸುತ್ತಾ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾ,ಸಮ ಸಮಾಜದ ಕನಸನ್ನು ಕಾಣುತ್ತಾ ಸಮುದಾಯ ಹಿತದ ಆಕಾಂಕ್ಷಿಗಳಾದ ವೆಂಕಟೇಶ ಅವರ "ಅರಿಯದಾದೆ" ಎಂಬ ಕವಿತೆ ನಿಮ್ಮ ಓದು ಮತ್ತು ಸಹಸ್ಪಂದನಕ್ಕಾಗಿ. ಡಾ.ಶ್ರೀಪಾದ ಶೆಟ್ಟಿ ಸಂ. ಆಲೋಚನೆ.ಕಾಂ

Comments